ನವದೆಹಲಿ: ವ್ಯಾಪಂ ಹಗರಣದಲ್ಲಿ ಆರೋಪಿಗಳು ಹಾಗೂ ಸಾಕ್ಷಿದಾರರೆಲ್ಲರೂ ಸಾವನ್ನಪ್ಪುತ್ತಿರುವುದು ಸಹಜ ಸಾವಾಗಿದ್ದು, ವ್ಯಾಪಂ ಹಗರಣಕ್ಕೂ ಆರೋಪಿಗಳ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಮಧ್ಯಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್ ಸೋಮವಾರ ಹೇಳಿದ್ದಾರೆ.
ವ್ಯಾಪಂ ಹಗರಣಕ್ಕೆ ಸಂಬಂಧ ಪಟ್ಟ ಆರೋಪಿಗಳು ಹಾಗೂ ಸಾಕ್ಷಿದಾರರು ದಿನಕಳೆದಂತೆ ಸಾವನ್ನಪ್ಪುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲೇ ಇದೀಗ ಮಧ್ಯಪ್ರದೇಶದ ಗೃಹ ಸಚಿವರು ಸಾವಿಗೂ ಹಗರಣಕ್ಕೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ಬಾಬುಲಾಲ್ ಗೌರ್ ಅವರು, ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಸಾವನ್ನಪ್ಪಿತ್ತಿರುವುದು ಸಹಜ ಸಾವಾಗಿದ್ದು, ಹಗರಣಕ್ಕೂಸಾವಿಗೂ ಸಂಬಂಧವಿಲ್ಲ ಹೀಗಾಗಿ ಪ್ರಕರಣವನ್ನು ಸಿಬಿಐ ವಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ದೇಶದಾದ್ಯಂತ ಸಂಚಲನ ಮೂಡಿಸಿರುವ ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದಷ್ಟೇ ಆರೋಪಿಗಳಾದ ನರೇಂದ್ರ ಸಿಂಗ್ ತೋಮರ್ ಹಾಗೂ ರಾಜೇಂದ್ರ ಗ್ವಾಲಿಯರ್ ಎಂಬುವವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಇವರಿಬ್ಬರ ಸಾವಿನಂತೆ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳು ಹಾಗೂ ಸಾಕ್ಷಿಗಳು ಎಂದು ಹೇಳಲಾಗುತ್ತಿದ್ದ 25 ಮಂದಿ ಸಾವನ್ನಪ್ಪಿದ್ದರು. ಪ್ರಕರಣ ಕುರಿತಂತೆ ಹಲವು ಚರ್ಚೆಗಳು ಆರಂಭವಾಗಿದ್ದವಲ್ಲದೇ, ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಆಗ್ರಹಿಸಿದ್ದರು.
Advertisement