ನವದೆಹಲಿ: ಉತ್ತರ ಭಾರತದ ಅನೇಕ ನಗರಗಳು ಹಿಮಪಾತ, ಮಳೆಯಿಂದ ತತ್ತರಿಸಿದೆ. ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಕೆಳಮಟ್ಟಕ್ಕಿಳಿದಿದ್ದು, ಹಲವಾರು ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಹಿಮಾಚಲ ಪ್ರದೇಶದಲ್ಲಿ ತೀವ್ರ ಕುಳಿರ್ಗಾಳಿ ಮತ್ತು ಹಿಮದಿಂದಾಗಿ ಇಬ್ಬರು ಮೃತರಾಗಿದ್ದಾರೆ.
ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿಯೂ ಅಕಾಲಿಕ ಮಳೆ ಸುರಿದಿದ್ದು, ಭಾರಿ ಬೆಳೆ ಹಾನಿಯಾಗಿರುವುದಾಗಿ ರೈತರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರು.1ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿ ಉಂಟಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕುಸಿತ: ದೆಹಲಿ, ಹರ್ಯಾಣ, ಚಂಡಿಗಡ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬಹಳಷ್ಟು ಸ್ಥಳಗಳಲ್ಲಿ ಮಳೆಯಾಗಿದ್ದು, ಜಲಾವೃತವಾಗಿದೆ. ಈ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜಮ್ಮ-ಶ್ರೀನಗರ ಹೆದ್ದಾರಿ ಹಿಮದಿಂದ ಮುಚ್ಚಲ್ಪಟ್ಟಿದ್ದು, ಹಲವೆಡೆ ಹಿಮಪಾತದಿಂದ ಭೂ ಕುಸಿತ ಉಂಟಾಗಿವೆ. ಇದರಿಂದಾಗಿ ದೇಶಧ ಇತರೆಡೆಗಳ ಸಂಪರ್ಕ ಕಡಿತಗೊಂಡಿದೆ. ಇಲ್ಲಿ 15ಕ್ಕೂ ಹೆಚ್ಚು ಕಟ್ಟಡಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ.
ಪೊಲೀಸರು ಈ ಕುರಿತಂತೆ ಮಾಹಿತಿ ನೀಡಿ, ರಸ್ತೆ ಮೇಲೆ ಹಿಮದ ತೆರವಿಗಾಗಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಆದರೆ ನಿರಂತರವಾಗಿ ಬೀಳುತ್ತಿರುವ ಮಳೆ ಮತ್ತು ಹಿಮದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮಳೆ
ಅಕಾಲಿಕ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಸಂಸದ ಓಂ ಬಿರ್ಲಾ, ರಾಜಸ್ಥಾನದಲ್ಲಿ ಬಿದ್ದ ಹೆಚ್ಚಿನ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ದೇವಿಂದರ್ ಹೂಡಾ, ಹರ್ಯಾಣದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದರು.
Advertisement