ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವರ್ಷ ಎಪ್ರೀಲ್ ತಿಂಗಳಲ್ಲಿ ಮತ್ತೆ ಸರ್ಕಾರ ರಚಿಸೋಣ ಎಂದು ಕಾಂಗ್ರೆಸ್ ಬಳಿ ಕೇಳಿಕೊಂಡಿದ್ದರು ಎಂದು ಕಾಂಗ್ರೆಸ್ನ ಮುಖಂಡರೊಬ್ಬರು ಹೇಳಿದ್ದಾರೆ.
ಬಿಜೆಪಿಯನ್ನು ದೆಹಲಿ ಗದ್ದುಗೆಯಿಂದ ದೂರ ಇಡುವ ಉದ್ದೇಶದಿಂದ ಕೇಜ್ರಿವಾಲ್ ಅವರು ಎಪ್ರೀಲ್ 2014ರಲ್ಲಿ ಕೇಂದ್ರ ಸಚಿವ ಗುಲಾಂ ನಬೀ ಆಜಾದ್ ಮತ್ತು ಜಯರಾಮ್ ರಮೇಶ್ ಅವರನ್ನು ಭೇಟಿ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪ ಇಟ್ಟಿದ್ದರು. ಆದರೆ, ಆಮ್ ಆದ್ಮಿ ಪಕ್ಷದ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ರಾಹುಲ್ ಗಾಂಧಿ ಒಪ್ಪಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರ ಸಲಹೆಯ ಮೇರೆಗೆ ರಾಹುಲ್ ಮತ್ತು ಸೋನಿಯಾ ಅವರು ಕೇಜ್ರಿವಾಲ್ ಅವರು ನೀಡಿದ್ದ ಈ ಆಫರ್ನ್ನು ತಿರಸ್ಕರಿಸಿದ್ದರು.
ಕೇಜ್ರಿವಾಲ್ ಅವರಿಗೆ ಅಧಿಕಾರಕ್ಕೇರಲು ಸಹಕರಿಸುವುದು ಪಕ್ಷಕ್ಕೆ ನಷ್ಟವನ್ನುಂಟು ಮಾಡಬಹುದು ಎಂದು ಶೀಲಾ ದೀಕ್ಷಿತ್ ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನಲೆಯಲ್ಲಿ ಸೋನಿಯಾ ಮತ್ತು ರಾಹುಲ್ ಮತ್ತೆ ಮೈತ್ರಿಗೆ ಸಿದ್ಧವಾಗಿಲ್ಲ ಎಂದು ನಾಯಕರು ಹೇಳಿದ್ದಾರೆ.
ಬುಧವಾರ ಪಕ್ಷದ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿರುವ ಆಪ್ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್, ಕೇಜ್ರಿವಾಲ್ ಕಾಂಗ್ರೆಸ್ ಜತೆ ಮರುಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದರು.
Advertisement