ಹುತಾತ್ಮ ದಿನದಂದೂ ಭೂ ಪ್ರಸ್ತಾಪ

ರೈತರ ಮನ ಗೆದ್ದರೆ ಭೂಸ್ವಾಧೀನ ಅಂಗೀಕಾರ ಪಡೆಯುವುದು ಸುಲಭ ಎಂದು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ರೈತ ಮಕ್ಕಳ ಮನಗೆಲ್ಲಲು ಮುಂದಾಗಿದ್ದಾರೆ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹುಸೈನಿವಾಲಾ: ರೈತರ ಮನ ಗೆದ್ದರೆ ಭೂಸ್ವಾಧೀನ ಅಂಗೀಕಾರ ಪಡೆಯುವುದು ಸುಲಭ ಎಂದು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ರೈತ ಮಕ್ಕಳ ಮನಗೆಲ್ಲಲು ಮುಂದಾಗಿದ್ದಾರೆ.

`ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಭೂಸ್ವಾಧೀನ ವಿಧೇಯಕದ ಬಗ್ಗೆ ರೈತರಿಗಿರುವ ಸಂದೇಹಗಳನ್ನು ಪರಿಹರಿಸಲು ಯತ್ನಿಸಿದ ಅವರು ಈಗ ರೈತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಂಜಾಬ್‍ನಲ್ಲಿ ಸೋಮವಾರ ನಡೆದ ಹುತಾತ್ಮರ ದಿನಾಚರಣೆಯಲ್ಲೂ ಪ್ರಧಾನಿ ಮೋದಿ ಅವರು ಭೂಸ್ವಾಧೀನ ವಿಧೇಯಕದ ಬಗ್ಗೆಯೇ ಹೆಚ್ಚು ಹೊತ್ತು ಮಾತನಾಡಿದರು. ದೇಶದಲ್ಲಿ ಅಭಿವೃದ್ಧಿಯಾಗದಿದ್ದರೆ, ನಿಮ್ಮ ಮಕ್ಕಳ ಭವಿಷ್ಯ ಏನಾಗಬಹುದು? ಅವರೂ ಮುಂಬೈ, ದೆಹಲಿಯ ಕೊಳೆಗೇರಿಗಳಲ್ಲಿ ವಾಸಿಸಬೇಕೆಂಬುದು ನಿಮ್ಮ ಬಯಕೆಯೇ ಎಂದು ಪ್ರಶ್ನಿಸಿದ ಮೋದಿ, ಅಭಿವೃದ್ಧಿಯು ರೈತರಿಗೆ, ಅವರ ಮಕ್ಕಳಿಗೆ ಮತ್ತು ಅವರ ಗ್ರಾಮಗಳಿಗೆ ಲಾಭ ತಂದುಕೊಡಬಲ್ಲದು ಎಂದು ತಿಳಿಸಿದರು.

ಜತೆಗೆ, ಪ್ರತಿಪಕ್ಷಗಳು ವಿಧೇಯಕದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂಬುದನ್ನೂ ಪುನರುಚ್ಚರಿಸಿದರು. ಭಾರತೀಯ ಹುತಾತ್ಮರಿಗೆ ನಮನ ಸಲ್ಲಿಸುವ ಜಾಹೀರಾತುಗಳಲ್ಲಿ ಅಮೆರಿಕ ಯೋಧರ ಫೋಟೋ ಹಾಕುವ ಮೂಲಕ ಚಂಡೀಗಡ ಪಾಲಿಕೆ ಭಾರಿ ಎಡವಟ್ಟು ಮಾಡಿತ್ತು. ವಿಚಾರ ಬೆಳಕಿಗೆ ಬಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ತಪ್ಪು ತಿದ್ದುಕೊಂಡ ಪಾಲಿಕೆ, ಎಲ್ಲ ಜಾಹೀರಾತುಗಳನ್ನು ವಾಪಸ್ ಪಡೆಯಿತು. ಭಗತ್‍ಸಿಂಗ್, ರಾಜ್ ಗುರು, ಸುಖ್‍ದೇವ್ ಹುತಾತ್ಮರಾದ ದಿನದ ಪ್ರಯುಕ್ತ ಚಂಡೀಗಡದಾದ್ಯಂತ ಜಾಹೀರಾತು ಫಲಕಗಳನ್ನು ಹಾಕಲಾಗಿತ್ತು. ಅವುಗಳಲ್ಲಿ ಅಮೆರಿಕ ಸೈನಿಕರ ಫೋಟೋಗಳಿದ್ದವು, ಅವರ ಸಮವಸ್ತ್ರದಲ್ಲಿಯೇ ಅಮೆರಿಕದ ಧ್ವಜ ಎದ್ದು ಕಾಣುತ್ತಿತ್ತು. ಮೇಯರ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com