ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿ, ತನ್ನನ್ನು ವಿರೋಧಿಸುವ ಜನರನ್ನು ಲೈಕ್ ಮಾಡಲ್ಲ: ಭೂಷಣ್

ಆಮ್ ಆದ್ಮಿ ಪಕ್ಷ(ಎಎಪಿ)ದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಾಗಿದ್ದು,...
ಪ್ರಶಾಂತ್ ಭೂಷಣ್ - ಯೇಗೇಂದ್ರ ಯಾದವ್
ಪ್ರಶಾಂತ್ ಭೂಷಣ್ - ಯೇಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಾಗಿದ್ದು, ಅವರು ತನ್ನನ್ನು ವಿರೋಧಿಸುವ ಜನರನ್ನು ಇಷ್ಟಪಡುವುದಿಲ್ಲ ಎಂದು ಬಂಡಾಯ ನಾಯಕ ಪ್ರಶಾಂತ್ ಭೂಷಣ್ ಅವರು ಶುಕ್ರವಾರ ಹೇಳಿದ್ದಾರೆ.

ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಹಾಗೂ ಯೇಗೇಂದ್ರ ಯಾದವ್ ಅವರು ಇಂದು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಇಬ್ಬರೂ ನಾಯಕರು ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷದಿಂದ ಜನರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಆಪ್ ಕೂಡ ಬೇರೆ ಪಕ್ಷಗಳ ರೀತಿ ಆಗುತ್ತಿದೆ. ಪಾರದರ್ಶಕತೆಯನ್ನು ಪ್ರಶ್ನಿಸುವ  ಮತ್ತು ಆಂತರಿಕ ಪ್ರಜಾಪ್ರಭುತ್ವದ ಕುರಿತಂತೆ ಕನಿಷ್ಠ ಚರ್ಚೆ ನಡೆಸುವ ಏಕೈಕ ಪಕ್ಷ ಎಎಪಿಯಾಗಿತ್ತು. ಆದರೆ ಈಗ ಅದನ್ನು ನಾವು ಕಳೆದುಕೊಂಡಿದ್ದೇವೆ ಎಂದು ಯಾದವ್ ಹೇಳಿದರು.

ಇನ್ನು ಪಕ್ಷದೊಳಗೆ ಪ್ರಜಾಪ್ರಭುತ್ವವೇ ಇಲ್ಲ ಎಂದು ಆರೋಪಿಸಿದ ಭೂಷಣ್, ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದರು. ಅಲ್ಲದೆ ಪಕ್ಷದಲ್ಲಿನ ಕೆಲವರು ನನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದೊಳಗೆ ಒಡಕು ಮೂಡಿಸಿ ದೆಹಲಿಯಲ್ಲಿ ಎಎಪಿ ಸರ್ಕಾರ ರಚಿಸುವುದು ಕೇಜ್ರಿವಾಲ್ ಬಯಕೆಯಾಗಿತ್ತು. ಕಾಂಗ್ರೆಸ್ ಶಾಸಕರ ಜೊತೆ ನಡೆಸಿದ ಮಾತುಕತೆಯನ್ನು ನಾವೆಲ್ಲ ಮುಚ್ಚಿಟ್ಟಿದ್ದೇವು ಎಂದು ಭೂಷಣ್ ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com