ಕೌಲಾಲಂಪುರ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ, ಭಾರತೀಯ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗೂರುಜಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಲೇಶ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕಳೆದ ವಾರ ರವಿಶಂಕರ್ ಅವರು ಪೆನಾಂಗ್ನಲ್ಲಿದ್ದಾಗ ಇಸಿಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆಯ ಪತ್ರ ಬಂದಿತ್ತು. ರವಿಶಂಕರ್ ಅವರು ಜಾರ್ಜ್ ಟೌನ್ ಮತ್ತು ಬಟು ಕವಾನ್ನಲ್ಲಿ ನಡೆಸಿಕೊಟ್ಟಿದ್ದ ಯೋಗೋತ್ಸವ ಮತ್ತು ಆಧ್ಯಾತ್ಮಿಕ ಸಂವಾದದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ರವಿಶಂಕರ್ ಅವರಿಗೆ ಇಸಿಸ್ನಿಂದ ಜೀವ ಬೆದರಿಕೆ ಪತ್ರ ಬಂದಿರುವುದನ್ನು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಖಲೀದ ಅಬು ಬಕರ್ ದೃಢೀಕರಿಸಿದ್ದು ಈ ಬಗ್ಗೆ ತನಿಖೆಯನ್ನು ಆರಂಭಿಸಿರುವುದಾಗಿ ಹೇಳಿದ್ದಾರೆ.
ಕೌಲಾಲಂಪುರ ಸಮೀಪದ ಶಾ ಆಲಂ ಹೊರವಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್ ಶಾಖಾ ಕಚೇರಿಗೆ ಸ್ಥಳೀಯವಾಗಿಯೇ ಪತ್ರ ಅಂಚೆಗೆ ಹಾಕಲಾಗಿದ್ದು ಈ ಪತ್ರದ ಮೂಲ ಎಲ್ಲಿದೆ ಎಂಬುದನ್ನು ಪೊಲೀಸರು ಶೋಧಿಸುತ್ತಿದ್ದಾರೆ.
ರವಿಶಂಕರ್ ಅವರು ಪೆನಾಂಗ್ನಲ್ಲಿದ್ದಾಗ ಉಳಿದುಕೊಂಡಿದ್ದ ಹೊಟೇಲ್ನ ಮ್ಯಾನೇಜರ್ಗೆ ಆ ಪತ್ರವನ್ನು ಹಾಕಲಾಗಿತ್ತು. ಪತ್ರದಲ್ಲಿ ಇಸಿಸ್ನ ಕಪ್ಪು ಧ್ವಜ ಮತ್ತು ರುಂಡ ಮುಂಡ ಚೆಂಡಾಡಲ್ಪಟ್ಟ ಒತ್ತೆಯಾಳು ಒಬ್ಬನ ದೇಹವನ್ನು ಕಾಣಿಸುವ ಚಿತ್ರವು ಪತ್ರದಲ್ಲಿತ್ತು.
ಮಲೇಶ್ಯದಲ್ಲಿ ರವಿಶಂಕರ್ ಅವರು ತಮ್ಮ ಹಿಂದೂ ಚಟುವಟಿಕೆಗಳನ್ನು ಮುಂದುವರಿಸಿದ್ದೇ ಆದಲ್ಲಿ ಅವರು ಉಳಿದುಕೊಂಡಿರುವ ನಿಮ್ಮ ಹೊಟೇಲನ್ನು ನಾಶ ಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ಮ್ಯಾನೇಜರ್ಗೆ ನೀಡಲಾಗಿತ್ತು.
ರವಿಶಂಕರ್ ಮತ್ತು ಅವರ ಆರ್ಟ್ ಆಫ್ ಲಿವಿಂಗ್ ಸಂಘಟನೆಯು ಇರಾನ್ ಮತ್ತು ಇರಾಕ್ನ ಇಸ್ಲಾಮಿಕ್ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಮಧ್ಯಪೂರ್ವದಲ್ಲಿನ ಜನರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತಿರುವುದಾಗಿ ಇಸಿಸ್ ಪತ್ರದಲ್ಲಿ ಆರೋಪಿಸಿತ್ತು.
Advertisement