ನವದೆಹಲಿ: ಆಪ್ ಕಾರ್ಯಕರ್ತೆಯೊಂದಿಗೆ ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಗಾಳಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದರೂ ಇದನ್ನು ನಿರಾಕರಿಸದೇ ಮೌನ ವಹಿಸಿರುವ ಕುಮಾರ್ ವಿಶ್ವಾಸ್ ವಿರುದ್ದ ಆಪ್ ಕಾರ್ಯಕರ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷದಿಂದ ಅಮೇಥಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕುಮಾರ್ ವಿಶ್ವಾಸ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಮಹಿಳಾ ಕಾರ್ಯಕರ್ತೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಕುಮಾರ್ ವಿಶ್ವಾಸ್ ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ವಿಶ್ವಾಸ್ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಬಾರ್ಖಾ ಶುಕ್ಲಾ ಸಿಂಗ್, ಕುಮಾರ್ ವಿಶ್ವಾಸ್ ವಿರುದ್ಧ ಆಪ್ ಸ್ವಯಂಸೇವಕಿ ಪೊಲೀಸ್ ಕಮಿಷನರ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಲಿಖಿತ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಮ್ಮಿಬ್ಬರ ನಡುವೆ ಅಕ್ರಮ ಸಂಬಂಧ ಇದೆ ಎಂಬ ಊಹಾಪೋಹವನ್ನು ವಿಶ್ವಾಸ್ ಈವರೆಗೂ ಅಲ್ಲಗಳೆದಿಲ್ಲ. ಈ ಆರೋಪದಿಂದಾಗಿ ನನ್ನ ಪತಿ ನನ್ನ ಬಿಟ್ಟು ಹೋಗಿದ್ದಾರೆ. ಎರಡು ಮಕ್ಕಳಾಗಿರುವ ನನಗೆ ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಸಂತ್ರಸ್ತೆ ತಮ್ಮ ಸಂಕಷ್ಟವನ್ನು ತೊಡಿಕೊಂಡಿದ್ದಾರೆ.
Advertisement