ಗಾಂಧಿನಗರ: ಬೆಳೆ ಹಾನಿಯಿಂದ ನಷ್ಟದಲ್ಲಿರುವ ರೈತರ ಕಷ್ಟ ಹಾಗೂ ಸಮಸ್ಯೆ ಪಾದಯಾತ್ರೆಯಿಂದ ಬಗೆಹರಿಯುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಗುಜರಾತ್ ನ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ಅಮಿತ್ ಶಾ ಅವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ರೈತರ ಸಮಸ್ಯೆ ಅರಿಯಲು ರಾಹುಲ್ ಗಾಂಧಿ ಅವರು ವಿವಿಧ ರಾಜ್ಯಗಳಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ನಾಯಕರು ಪಾದಯಾತ್ರೆ ಮಾಡಲಿ ಅಥವಾ ಬಸ್ ಯಾತ್ರೆ ಮಾಡಲಿ ಇದರಿಂದ ರೈತರಿಗೆ ಯಾವ ಲಾಭವೂ ಇಲ್ಲ. ಮೋದಿ ಸರ್ಕಾರ ರೈತರಿಗೆ ಏನೇನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭೂ ಕಾಯ್ದೆ ತಿದ್ದುಪಡಿ ಕುರಿತಂತೆ ಮಾತನಾಡಿರುವ ಅವರು, ಕಾಯ್ದೆ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಯಾರು ಏನೇ ಸುಳ್ಳು ಹೇಳಿದರೂ ಮೋದಿ ಸರ್ಕಾರ ಈ ವರೆಗೂ ಮಾಡಿರುವ ಅಭಿವೃದ್ಧಿಯ ಕಾರ್ಯಗಳ ದಾಖಲೆಗಳು ಸುಳ್ಳು ಹೇಳಲಾರದು. ಭೂ ಕಾಯ್ದೆ ತಿದ್ದುಪಡಿ ವಿಷಯವನ್ನಿಡಿದು ವಿರೋಧ ಪಕ್ಷದ ನಾಯಕರು ರೈತರಿಗೆ ತಪ್ಪು ಮಾಹಿತಿ ನೀಡಿ ರಾಜಕೀಯ ಆಟವಾಡುತ್ತಿದೆ. ರೈತರ ಭೂಮಿಯ ಸಣ್ಣತುಣಕನ್ನು ಸಹ ಇತರೆ ಸಂಸ್ಥೆಗಳಿಗೆ ಸರ್ಕಾರ ನೀಡುವುದಿಲ್ಲ. ತಪ್ಪುಮಾಹಿತಿಗಳನ್ನು ನಂಬಬೇಡಿ ಎಂದು ಶಾ ಹೇಳಿದ್ದಾರೆ.
ಮೇ.26 ಕ್ಕೆ ನಮ್ಮ ಸರ್ಕಾರಕ್ಕೆ 1 ವರ್ಷವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ನಾವು ನೀಡಿದ್ದ ಭ್ರಷ್ಟಾಚಾರ, ಪಾರದರ್ಶಕತೆ, ಹಣದುಬ್ಬರ, ಹಾಗೂ ಉದ್ಯೋಗವಕಾಶ ಸೇರಿದಂತೆ ಉಳಿದೆಲ್ಲಾ ಭರವಸೆಗಳನ್ನು ಪೂರೈಸಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಜಿಡಿಪಿ ಸಂಖ್ಯೆ 4.4 ರಷ್ಟಿತ್ತು, ಇದೀಗ ಇದರ ಸಂಖ್ಯೆ 5.7 ಕ್ಕೇರಿದೆ. 2019ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.10 ಕ್ಕೇರಿಸುವ ಭರವಸೆಯನ್ನು ಮೋದಿ ನೀಡಿದ್ದಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
Advertisement