ನವದೆಹಲಿ: ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ಮಂಗಳವಾರವೂ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಯುಪಿಎ ಸರ್ಕಾರದ ವಿಧೇಯಕ `ಕೊಂದು' ರೈತರಿಂದ ಭೂಮಿ ವಶಪಡಿಸಿಕೊಳ್ಳಲು ಹೊರಟಿದೆ. ಒಂದು ವೇಳೆ ಸರ್ಕಾರ ಈ ರೈತ ವಿರೋಧಿ ವಿಧೇಯಕವನ್ನು ಹಿಂಪಡೆಯದಿದ್ದರೆ, ಬಿದಿಗಿಳಿದು ಪ್ರತಿಭಟನೆ ನಡೆಸುವುದಾಗಿ ರಾಹುಲ್ ಬೆದರಿಕೆ ಹಾಕಿದ್ದಾರೆ. ಭೂಮಿ ಕೊರತೆಯಿಂದಾಗಿ 100ರಲ್ಲಿ 8 ಯೋಜನೆಗಳಷ್ಟೇ ಬಾಕಿ ಉಳಿದಿವೆ ಎಂದು ಹಣಕಾಸು ಸಚಿವಾಲಯವೇ ಒಪ್ಪಿಕೊಂಡಿದೆ. ಇಷ್ಟಾದರೂ ಭೂಸ್ವಾಧೀನ ವಿಧೇಯಕದಲ್ಲಿ ಯುಪಿಎ ಅವಧಿಯ ರೈತ ಸ್ನೇಹಿ ಷರತ್ತುಗಳನ್ನು ಎನ್ಡಿಎ ಸರ್ಕಾರ ತೆಗೆದುಹಾಕಿದೆ. ಒಂದು ವೇಳೆ ಹೊಸ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ಪಡೆಯಲು ಯತ್ನಿಸಿದರೆ ನಾವು ಬೀದಿಗಿಳಿಯುತ್ತೇವೆ ಎಂದು ರಾಹುಲ್ ಹೇಳಿದ್ದಾರೆ. ಜತೆಗೆ, `ಸೂಟ್- ಬೂಟ್'ನ ಕೆಲಸ ಮುಂದುವರಿಯಲು ಸಾಧ್ಯವಿಲ್ಲ. ಕಳ್ಳರು ಮಧ್ಯರಾತ್ರಿ ಬರುತ್ತಾರೆ. ಮೆಲ್ಲಗೆ ಕಿಟಕಿಯಿಂದ ಜಿಗಿದು ಮನೆಯೊಳಗೆ ಪ್ರವೇಶಿಸುತ್ತಾರೆ ಎಂದು ನನಗೆ ಹೇಳಲಾಗಿತ್ತು. ಆದರೆ, ದೊಡ್ಡ ಕಳ್ಳರು ದಿನದ ಅವ„ಯಲ್ಲೇ ಬರುತ್ತಾರೆ.
ಸೂಟ್ ಹಾಕಿಕೊಂಡು ಇರುತ್ತಾರೆ ಎಂದು ರಾಹುಲ್ ಸರ್ಕಾರದ ಕಾಲೆಳೆದಿದ್ದಾರೆ. ಇದೇ ವೇಳೆ, ಸರ್ಕಾರಕ್ಕೆ ಬುಂದೇಲ್ ಕಾಂಡ ಅಥವಾ ರಾಜಸ್ಥಾನದ ಭೂಮಿ ಬಗ್ಗೆ ಆಸಕ್ತಿ ಇಲ್ಲ. ಬದಲಾಗಿ ನೋಯ್ಡಾ
ಸಮೀಪ ಹಾಗೂ ನಗರ ಪ್ರದೇಶಗಳ ಭೂಮಿಯನ್ನಷ್ಟೇ ವಶಪಡಿಸಿಕೊಳ್ಳಲು ಉತ್ಸುಕತೆ ಇದೆ. ಜನರ ಕಾಲಿನಡಿ ಇರುವ ಚಿನ್ನವ ಕದಿಯುವುದೇ ಇವರ ಉದ್ದೇಶ ಎಂದು ರಾಹುಲ್ ಆರೋಪಿಸಿದ್ದಾರೆ.
ಸ್ಪೀಕರ್ರಿಂದ ತಾರತಮ್ಯ -ಕಾಂಗ್ರೆಸ್ ಆರೋಪ
ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ಕಾರದ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಲೋಕಸಭೆಯಲ್ಲಿ ಕೆಲಕಾಲ ಆಡಳಿತ, ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ
ಸದಸ್ಯರು ಸ್ಪೀಕರ್ ಅವರಿಗೆ ಬೆದರಿಕೆಯೊಡ್ಡುವುದು ಸರಿಯಲ್ಲ ಎಂದರು. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿಯಿಂದಾಗಿ 2 ಬಾರಿ ಕಲಾಪ ಮುಂದೂಡಬೇಕಾಯಿತು. ಸ್ಪೀಕರ್ ಸುಮಿತ್ರಾ ಅವರು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರಿಗೆ ಅಮೇಠಿಯಲ್ಲಿ ಫುಡ್ ಪಾರ್ಕ್ ರದ್ದು ಮಾಡುವ ವಿಚಾರವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟದ್ದೇ ಕಾಂಗ್ರೆಸ್ ಈ ರೀತಿಯ ಆರೋಪ ಮಾಡಲು ಕಾರಣವಾಯಿತು.
ಭೂಸ್ವಾಧೀನ ವಿಧೇಯಕ ಸಂಸತ್ತಿನ ಜಂಟಿ ಸಮಿತಿಗೆ ಪ್ರತಿಪ್ರತಿಗಳಿಂದ ವ್ಯಕ್ತವಾದ ಭಾರಿ ವಿರೋಧ ಹಾಗೂ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಭೂಸ್ವಾಧೀನ ವಿಧೇಯಕವನ್ನು ಸಂಸತ್ತಿನ ಜಂಟಿ ಸಮಿತಿ ಪರಿಶೀಲನೆಗೆ ಒಪ್ಪಿಸಿದೆ. ಈ ವಿಧೇಯಕಕ್ಕೆ ಪ್ರತಿಪಕ್ಷ ಮಾತ್ರವಲ್ಲದೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಹಾಗೂ ಅಕಾಲಿದಳದಿಂದಲೂ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಸರ್ಕಾರಕ್ಕೆ ಈ ರೀತಿಯ ಮಾಡುವುದು ಅನಿವಾರ್ಯವಾಯಿತು. ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಸಮಿತಿ ಈ ವಿಧೇಯಕವನ್ನು ಪರಿಶೀಲಿಸಿ ಮುಂಗಾರು ಅಧಿವೇಶನದ ಮೊದಲ ದಿನ ತನ್ನ ವರದಿ ಸಲ್ಲಿಸಲಿದೆ.
Advertisement