ನವದೆಹಲಿ: ಮುದ್ರಣ ಜಾಹೀರಾತುಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಫೋಟೋ ಹೊರತು ಪಡಿಸಿ ಬೇರಾವುದೇ ರಾಜಕಾರಣಿಗಳ ಚಿತ್ರವನ್ನು ಪ್ರಕಟಿಸಬಾರದು ಎಂಬ ಸುಪ್ರೀಂಕೋರ್ಟ್ ನ ಆದೇಶದ ವಿರುದ್ಧ ಡಿಎಂಕೆ ಮುಖಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕಿಡಿಕಾರಿದ್ದಾರೆ.
ಸುಪ್ರೀಂಕೋರ್ಟ್ ನ ಈ ಆದೇಶ ರಾಜ್ಯದ ಹಕ್ಕನ್ನು ಕಿತ್ತುಕೊಂಡಂತಿದೆ. ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಒಂದೇ ಹಂತದಲ್ಲಿರುತ್ತಾರೆ. ರಾಜ್ಯಗಳಲ್ಲಿ ಪ್ರಧಾನಮಂತ್ರಿಗಿಂತ ಮುಖ್ಯಮಂತ್ರಿಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಸಾರ್ವಜನಿಕರಿಗೆ ಮಾಹಿತಿ ಅಥವಾ ಸಂದೇಶ ನೀಡುವಾಗ ಜವಾಬ್ದಾರಿಯುತರಾಗಿರುವ ಮುಖ್ಯಮಂತ್ರಿಯ ಫೋಟೋ ಹಾಕಿದರೆ ಅದು ಹೆಚ್ಚು ಜನರಿಗೆ ತಲುಪುತ್ತದೆ. ಜನರಿಗೂ ಇದು ಸುಲಭವಾಗಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆದಾರರ ಹಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ರಾಜಕಾರಣಿಗಳು ಸರ್ಕಾರಿ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಜಾಹೀರಾತು ಪ್ರಕಟಣೆ ಕುರಿತಂತೆ ಕಠಿಣ ನಿಯಮ ವಿಧಿಸಬೇಕೆಂದು ಎನ್ ಜಿಒ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಈ ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಿ ಜಾಹೀರಾತಿನಲ್ಲಿ ಮುಖ್ಯಮಂತ್ರಿ, ಗವರ್ನರ್ ಅಥವಾ ಯಾವುದೇ ರಾಜ್ಯ ಸಚಿವರ ಫೋಟೋ ಬಳಸುವಂತಿಲ್ಲ. ಅದೇ ರೀತಿ ಕೇಂದ್ರದ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ ಹೊರತು ಪಡಿಸಿ, ಕೇಂದ್ರ ಸಚಿವರ ಯಾವುದೇ ಫೋಟೋಗಳನ್ನು ಬಳಸುವಂತಿಲ್ಲ ಎಂದು ಹೇಳಿತ್ತು. ಅಲ್ಲದೇ, ಹೊಸ ಮಾರ್ಗಸೂಚಿ ಉಲ್ಲಂಘಿಸದಂತೆ ತ್ರಿಸದಸ್ಯ ಸಮಿತಿಯೊಂದನ್ನು ಸುಪ್ರೀಂಕೋರ್ಟ್ ಬುಧವಾರ ನೇಮಕ ಮಾಡಿತ್ತು.
Advertisement