
ನವದೆಹಲಿ: ಸಾಮಾಜಿಕ ಭದ್ರತಾ ಯೋಜನೆಗಳಿಗೆ ರಾಷ್ಟ್ರಾದ್ಯಂತ ಏಳು ಕೋಟಿ ಜನ ನೋಂದಣಿ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದಿನಕ್ಕೆ ಒಂದು ರೂಪಾಯಿಗೆ ವಿಮಾ ರಕ್ಷಣೆ ಸೇರಿದಂತೆ ಮೂರು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಚಾಲನೆ ನೀಡಿದ್ದರು.
ಯೋಜನೆಗೆ ಮೇ 9ರಂದು ಚಾಲನೆ ನೀಡಲಾಗಿದ್ದು, ಕಳೆದ ಐದು ದಿನಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ 5.19 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ರಾಷ್ಟ್ರದೆಲ್ಲೆಡೆ ಜಿಲ್ಲೆಗಳಲ್ಲಿ ಇದು ಯಶಸ್ಸಿನತ್ತ ಸಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳಿಗೆ 6.7 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ನಿರ್ವಹಿಸುತ್ತಿದ್ದು, ಐದು ದಿನಗಳಲ್ಲಿ 1.59 ಕೋಟಿ ಜನರ ನೋಂದಣಿ ಮಾಡಿಸಿದ್ದಾರೆ.
ಅಟಲ್ ಪಿಂಚಣಿ ಯೋಜನೆಯನ್ನು ಎಪಿವೈ ನಿರ್ವಹಿಸುತ್ತಿದ್ದು, 70 ಸಾವಿರ ಜನ ನೋಂದಣಿ ಮಾಡಿಸಿದ್ದಾರೆ. ಈ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಯಶಸ್ಸಿನತ್ತ ಮುನ್ನಡೆಯುತ್ತಿದ್ದು, ಭವಿಷ್ಯದಲ್ಲಿ ಜನರಿಗೆ ಭದ್ರತೆ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದರು.
Advertisement