ಪಾಲಕರಿಲ್ಲದೆ ಮಕ್ಕಳ ಪ್ರಯಾಣಕ್ಕೆ ನಿಷೇಧ ಹೇರಿದ ನೇಪಾಳ ಸರ್ಕಾರ
ಕಠ್ಮಂಡು: ಭೂಕಂಪದಿಂದ ತತ್ತರಿಸಿರುವ ನೇಪಾಳದಲ್ಲಿ ಇದೀಗ ಮಕ್ಕಳ ಕಳ್ಳರ ಸಂಖ್ಯೆ ಹೆಚ್ಚಾಗಿದ್ದು, ಕಳ್ಳರ ವಿರುದ್ಧ ಕ್ರಮ ಕೈಗೊಂಡಿರುವ ನೇಪಾಳ ಸರ್ಕಾರ ಪೋಷಕರಿಲ್ಲದೆ ಮಕ್ಕಳು ಇತರರೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಕಳೆದ ತಿಂಗಳು ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ ಸಾವಿರಾರು ಮಂದಿ ನಿರಾಶ್ರಿರಾದರು. ಸಾವಿರಾರು ಮಕ್ಕಳು ತಮ್ಮ ತಂದೆ-ತಾಯಿ ಸಂಬಂಧಿಕರನ್ನು ಕಳೆದುಕೊಂಡು ಅನಾಥರಾದರು. ಇದೀಗ ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ದುಷ್ಕರ್ಮಿಗಳು ಮಕ್ಕಳ ಕಳ್ಳಸಾಗಣೆಗೆ ನೇಪಾಳವನ್ನು ಬಳಸಿಕೊಳ್ಳುತ್ತಿದ್ದಾರೆನ್ನುವುದು ವಿಷಾದಕರ ಸಂಗತಿಯಾಗಿದೆ.
ಮಕ್ಕಳ ಕಳ್ಳಸಾಗಣೆ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದು, ವಿದೇಶಿಯರು ನೇಪಾಳದ ಮಕ್ಕಳನ್ನು ದತ್ತು ಪಡೆಯುವ ಕುರಿತ ಅನುಮತಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇನ್ನು ಮುಂದೆ ಮಕ್ಕಳೊಂದಿಗೆ ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಗಳ ಮೇಲೆ ಪೊಲೀಸರು ಕಣ್ಗಾವಲಿರಿಸಲಿದ್ದು, ನೇಪಾಳದಾದ್ಯಂತ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ರಾಧಿಕ ಆರ್ಯಲ್ ಹೇಳಿದ್ದಾರೆ.
ಹಲವು ದಿನಗಳಿಂದ ನೇಪಾಳದಾದ್ಯಂತ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಮಕೊಂಡಿರುವ ಅಧಿಕಾರಿಗಳು ಬಿಹಾರದ ಪಶ್ಚಿಮ ಭಾಗದಲ್ಲಿರುವ ಚಂಪಾರನ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ ಜಾಲದ ಮೇಲೆ ದಾಳಿ ಮಾಡಿದ್ದರು. ದಾಳಿಯಲ್ಲಿ ಸುಮಾರು 26 ಮಕ್ಕಳ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಇಲಾಖೆ ಕಳುಹಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ