ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಇಂದು ಸಂಜೆಗೆ ಮುಕ್ತಾಯಗೊಂಡು ಇನ್ನು ಫಲಿತಾಂಶವಷ್ಚೇ ಬರಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಷ್ಟು ದಿನ ಬಿಹಾರದಲ್ಲಿ ಪ್ರಚಾರ, ರ್ಯಾಲಿ ಎಂದು ಒತ್ತಡದಲ್ಲಿದ್ದವರು ಇದೀಗ ಮತ್ತೆ ತಮ್ಮ ಆಡಳಿತದತ್ತ ಗಮನ ಹರಿಸಿದ್ದಾರೆ. ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಇದೇ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರುವ ಯೋಜನೆ ಅವರದ್ದು. ಹಾಗಾಗಿ ತಮ್ಮ ಸಂಪುಟದ ಇಬ್ಬರು ಹಿರಿಯ ಸಹೋದ್ಯೋಗಿಗಳಾದ ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರಿಗೆ ವಿರೋಧ ಪಕ್ಷದವರ ಜೊತೆ ಮಾತುಕತೆ ನಡೆಸಿ ಸರ್ಕಾರದ ಉದ್ದೇಶಿತ ಮಸೂದೆಗೆ ಶೀಘ್ರವೇ ಒಪ್ಪಿಗೆ ಪಡೆಯುವಂತೆ ಸೂಚಿಸಿದ್ದಾರೆ.
ಕಳೆದ ಅಧಿವೇಶನದಲ್ಲಿ ಲೋಕಸಭೆಯಿಂದ ಅನುಮೋದನೆಗೊಂಡು ರಾಜ್ಯಸಭೆಗೆ ಕಳುಹಿಸಲಾದ ಮಸೂದೆ ಅಲ್ಲೇ ಬಾಕಿಯಾಗಿತ್ತು. ಅದನ್ನು ಸಂಸದೀಯ ಆಯ್ಕೆ ಸಮಿತಿ ಮುಂದೆ ಇಡಲಾಗಿದೆ. ರಾಜ್ಯ ಸಭೆಯಲ್ಲಿ 67 ಸಂಸದರನ್ನು ಹೊಂದಿರುವ ಕಾಂಗ್ರೆಸ್, 12 ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್, 10 ಸಂಸದರನ್ನು ಹೊಂದಿರುವ ಬಹುಜನ ಸಮಾಜ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡು ಮಸೂದೆಗೆ ಶೀಘ್ರವೇ ಅಂಗೀಕಾರ ಪಡೆಯುವಂತೆ ಪ್ರಧಾನಿ ಸಚಿವರಿಗೆ ಸೂಚಿಸಿದ್ದಾರೆ. ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಪಡೆದಿದ್ದ ಮತ್ತೊಂದು ಪಕ್ಷವೆಂದರೆ 12 ಸಂಸದರನ್ನು ಹೊಂದಿದ ಎಡಿಎಂಕೆ.ಈ ಮಸೂದೆಯನ್ನು ವಿರೋಧಿಸುತ್ತಿರುವ ಎಡಿಎಂಕೆ, ರಾಜ್ಯಗಳಿಗೆ ಇರುವ ತೆರಿಗೆ ಸಂಗ್ರಹಣೆ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸುತ್ತದೆ.
ಸರ್ಕಾರ ಇದೀಗ ಮಸೂದೆ ಕುರಿತು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಬಿಎಸ್ಪಿ ಜೊತೆ ನೇರ ಮಾತುಕತೆ ನಡೆಸಲು ಮುಂದೆ ಬಂದಿದೆ. ನಿನ್ನೆ ದೆಹಲಿಯಲ್ಲಿ ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಸೂದೆಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಇಬ್ಬರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಒಪ್ಪಂದವೊಂದಕ್ಕೆ ಬರಲು ನಿರ್ಧರಿಸಿದ್ದಾರೆ. ಇದುವರೆಗೆ ವಿರೋಧ ಪಕ್ಷದವರ ಜೊತೆ ಚರ್ಚೆ ನಡೆಸಲು ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಆಪಾದಿಸುತ್ತಿದ್ದ ಕಾಂಗ್ರೆಸ್ ಇದೀಗ ಮತ್ತೊಂದು ಆಪಾದನೆ ಮಾಡುತ್ತಿದೆ. ನಿನ್ನೆ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ, ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರು ಮೊದಲು ವಿರೋಧ ಪಕ್ಷಗಳ ಜೊತೆ ಸಂಘರ್ಷ ಮನೋಭಾವವನ್ನು ಬಿಟ್ಟು, ರಚನಾತ್ಮಕ ಒಪ್ಪಂದಕ್ಕೆ ಒಲವು ತೋರಬೇಕು ಎಂದು ಹೇಳಿದರು.
ಸಂಸದೀಯ ಪ್ರಜಾಪ್ರಭುತ್ವವನ್ನು ಕೇವಲ ಒಂದು ಮಸೂದೆಗೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಪ್ರಧಾನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಅಹಂಕಾರದ ಮನೋಭಾವ ಹೊಂದಿದ್ದಾರೆ. ವಿರೋಧಪಕ್ಷಗಳನ್ನು ಪ್ರತಿನಿತ್ಯ ಅಪಹಾಸ್ಯ, ಬೆದರಿಸುವ ತಂತ್ರವನ್ನು ಸರ್ಕಾರ ರೂಢಿಸಿಕೊಂಡಿದೆ. ಸಾಮಾನ್ಯ ಜನತೆಯ ನಿಜವಾದ ಸಮಸ್ಯೆಗಳ ಕುರಿತು ಸರ್ಕಾರ ಗಮನಹರಿಸುತ್ತಿಲ್ಲ ಎಂದು ಆನಂದ್ ಶರ್ಮಾ ಆಪಾದಿಸಿದರು.
Advertisement