ಎಲ್ಲರಿಗೂ ನ್ಯಾಯ ಸಿಗಬೇಕು: ನರೇಂದ್ರ ಮೋದಿ

ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಜೊತೆಗೆ ಸಬ್ ಕಾ ನ್ಯಾಯ ಕೂಡ ಆಗಬೇಕು, ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ''ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಜೊತೆಗೆ ಸಬ್ ಕಾ ನ್ಯಾಯ್'' ಕೂಡ ಆಗಬೇಕು, ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ ಮಾತು.ದೆಹಲಿಯಲ್ಲಿ ಇಂದು ಅವರು ನ್ಯಾಯ ಸೇವೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಡವರಿಗೆ ಹೇಗೆ ನ್ಯಾಯ ದೊರಕಿಸಿಕೊಡಬಹುದು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಬಡವರ ಬಗ್ಗೆ ತುಂಬಾ ಕಾಳಜಿ ತೋರಿಸಲಾಗುತ್ತಿದ್ದರೂ ಅದರ ಬಗ್ಗೆ ಜನರಲ್ಲಿ ಅಷ್ಟೊಂದು ಜಾಗೃತಿ ಉಂಟಾಗಿಲ್ಲ ಎಂದು ಹೇಳಿದರು.
ಬಡವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಲೋಕ ಅದಾಲತ್ ಗಳ ಪಾತ್ರ ಮುಖ್ಯವಾಗಿದೆ ಸಮಾಜದಲ್ಲಿ ಎಲ್ಲ ಜನರ ಉದ್ಧಾರವಾಗಬೇಕೆಂಬುದರಲ್ಲಿ ನಂಬಿಕೆ ಇಟ್ಟಿರುವವನು ನಾನು. ಎಲ್ಲರ ಜೊತೆ, ಎಲ್ಲರ ವಿಕಾಸವಾಗಬೇಕಿದ್ದು, ಎಲ್ಲರಿಗೂ ನ್ಯಾಯವೂ ಸಿಗಬೇಕು ಎಂದು ತಿಳಿಸಿದರು.

ಎಲ್ಲರಿಗೂ ನ್ಯಾಯ ಸಿಗಬೇಕೆಂಬ ತಮ್ಮ ಯೋಜನೆಗೆ ದೇಶದ ಕಾನೂನು ವಿಶ್ವವಿದ್ಯಾಲಯಗಳು ಕೊಡುಗೆ ನೀಡಬೇಕೆಂದು ಅವರು ಕರೆ ನೀಡಿದರು.ಲೋಕ ಅದಾಲತ್ ದೇಶದ ಮೂಲೆ ಮೂಲೆಗೂ ತಲುಪಬೇಕು. ಈ ನಿಟ್ಟಿನಲ್ಲಿ ಕಾನೂನು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯ ಯೋಜನೆಯನ್ನು ಸಿದ್ಧಪಡಿಸುವಂತೆ ಹೇಳಬೇಕು. ಅವರು ಅಧ್ಯಯನ ನಡೆಸಿ ತಮ್ಮ ಸಲಹೆಗಳನ್ನು ನೀಡಬೇಕು. ಕಾನೂನು ವಿದ್ಯಾರ್ಥಿಗಳಿಗೆ ಲೋಕ ಅದಾಲತ್ ಅಂದರೇನು ಎಂಬುದು ಸರಿಯಾಗಿ ಗೊತ್ತಾಗಬೇಕು ಎಂದರು.

ಕಾನೂನು ಅರಿವಿನೊಂದಿಗೆ ಸಾಂಸ್ಥಿಕ ಜಾಗೃತಿ ಅತಿ ಮುಖ್ಯ. ಸಾಮಾನ್ಯ ಜನರು ಅನ್ಯಾಯ ಹೊರಲು ಸಿದ್ಧರಿದ್ದಾರೆ, ಆದರೆ ಅವರು ಕೋರ್ಟ್, ಕಚೇರಿಯಿಂದ ದೂರವುಳಿಯಲು ಇಚ್ಛಿಸುತ್ತಾರೆ. ಈ ಅಂತರವನ್ನು ಹೋಗಲಾಡಿಸಲು ಲೋಕ ಅದಾಲತ್ ಗಳು ಸೇತುವೆಯಂತೆ ಕಾರ್ಯ ನಿರ್ವಹಿಸಲಿದೆ. ದೇಶದಲ್ಲಿ ಸುಮಾರು 15 ಲಕ್ಷ ಲೋಕ ಅದಾಲತ್ ಗಳಿದ್ದು, ಎಂಟೂವರೆ ಕೋಟಿ ಜನರಿಗೆ ನ್ಯಾಯ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com