ಚೆನ್ನೈ: ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತಿ ಪದ್ಮಭೂಷಣ ಪ್ರಶಸ್ತಿ ಹಿಂತಿರುಗಿಸಿರುವ ವಿಜ್ಞಾನಿ ಪಿಎಂ ಭಾರ್ಗವ ಗೋಮಾಂಸದ ಬಗ್ಗೆ ಮಾತನಾಡಿದ್ದು, ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ಗೋಮಾಂಸವನ್ನು ಪರಿಹಾರವಾಗಿ ಸೂಚಿಸಿದೆ ಎಂದು ಹೇಳಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಹಿಂತಿರುಗಿಸುತ್ತಿರುವ ಬಗ್ಗೆ ರಾಷ್ಟ್ರಪತಿಗಳಿಗೆ ಬರೆದಿರುವ ಭಾರ್ಗವ ಅವರು ಪುರಾತನ ಕಾಲದ ಭಾರತದಲ್ಲಿ ಗೋಮಾಂಸ ಸೇವನೆಗೆ ಯಾವುದೇ ನಿರ್ಬಂಧ ಇರಲಿಲ್ಲ ಎಂದು ಹೇಳಿದ್ದಾರೆ. ಚರಕ ಸಂಹಿತೆಯನ್ನು ಉಲ್ಲೇಖಿಸಿರುವ ಭಾರ್ಗವ, ವಾಯು, ಅನಿಯಮಿತ ಜ್ವರ, ಒಣ ಕೆಮ್ಮು, ಆಯಾಸ ಸೇರಿದಂತೆ ಹಲವು ವಿಧದ ಕಾಯಿಲೆಗಳಿಗೆ ಗೋಮಾಂಸ ಸೇವನೆ ಮಾಡಲು ಅನುಮತಿ ಇತ್ತು ಎಂದು ಹೇಳಿದ್ದಾರೆ.
ನಾನು ಏನು ತಿನ್ನಬೇಕು, ಯಾವುದನ್ನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ನಿರ್ಧರಿಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಗೆ ಸಂಬಂಧಿಸಿದ ಸಂಘಟನೆಗಳೇ ದಾದ್ರಿ ಪ್ರಕರಣಕ್ಕೆ ಕಾರಣ ಎಂದು ಭಾರ್ಗವ ಆರೋಪಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಜ್ಞಾನಿ ಭಾರ್ಗವ, ಅಕ್ಟೋಬರ್ ನಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರ ಪ್ರಕಟಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
Advertisement