ದೇಶ
ಶಬರಿಮಲೆ ತೀರ್ಥಯಾತ್ರೆ ಆರಂಭ
ಮಂಡಲಕಾಲ-ಮಕರ ವಿಳಕ್ಕ್ (ಮಕರಜ್ಯೋತಿ) ತೀರ್ಥಯಾತ್ರೆಗೆ ಶಬರಿ ಮಲೆ ದೇಗುಲದ ಬಾಗಿಲು ಇಂದು ತೆರೆಯಲಿದೆ. ಇಂದಿನಿಂದ 66 ದಿನಗಳ ಕಾಲ...
ಶಬರಿಮಲೆ: ನಾಳೆ ಮಲಯಾಳಂ ತಿಂಗಳು ವೃಶ್ಚಿಕ 1. ಮಂಡಲಕಾಲ-ಮಕರ ವಿಳಕ್ಕ್ (ಮಕರಜ್ಯೋತಿ) ತೀರ್ಥಯಾತ್ರೆಗೆ ಶಬರಿ ಮಲೆ ದೇಗುಲದ ಬಾಗಿಲು ಇಂದು ತೆರೆಯಲಿದೆ. ಇಂದಿನಿಂದ 66 ದಿನಗಳ ಕಾಲ ಅಯ್ಯಪ್ಪ ಭಕ್ತರಿಗೆ ತೀರ್ಥಯಾತ್ರೆಯ ಕಾಲ. ಡಿಸೆಂಬರ್ 27ರಂದು ಮಂಡಲಪೂಜೆ ಮುಗಿದ ನಂತರ ದೇಗುಲದ ಬಾಗಿಲು ಮುಚ್ಚಲಾಗುವುದು. ಆಮೇಲೆ 30ರಂದು ಮತ್ತೆ ಬಾಗಿಲು ತೆರೆಯುವುದು. ಜನವರಿ 15 ರಂದು ಮಕರಜ್ಯೋತಿ ದರ್ಶನವಾದ ನಂತರ ಜನವರಿ 20ರಂದು ಮಕರ ಮಾಸ ಪೂಜೆ ಮುಗಿಸಿ ಬಾಗಿಲು ಮತ್ತೆ ಮುಚ್ಚಲಾಗುವುದು.
ಸೋಮವಾರ ಸಂಜೆ 5 ಗಂಟೆಗೆ ಮೇಲ್ಶಾಂತಿ (ಪ್ರಧಾನ ಅರ್ಚಕ) ಏಳಿಕ್ಕೋಡ್ ಕೃಷ್ಣದಾಸ್ ನಂಬೂದಿರಿ ದೇಗುಲದ ಬಾಗಿಲು ತೆರೆದು ಗರ್ಭಗುಡಿಯಲ್ಲಿ ದೀಪ ಬೆಳಗಲಿದ್ದಾರೆ. 18 ಮೆಟ್ಟಿಲುಗಳನ್ನಿಳಿದು ಶುದ್ಧೀಕರಣ ಆದ ನಂತರ ಭಕ್ತರಿಗೆ 18 ಮೆಟ್ಟಿಲು ಏರಲು ಅವಕಾಶ ನೀಡಲಾಗುವುದು. ಹೊಸ ಅರ್ಚಕರು ಮೊದಲು ಹದಿನೆಂಟು ಮೆಟ್ಟಿಲು ಹತ್ತಲಿದ್ದಾರೆ.
ನಾಳೆ ಮುಂಜಾನೆ 4.10 ಕ್ಕೆ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವ ಮಹಾಗಣಪತಿ ಹೋಮದೊಂದಿಗೆ ತೀರ್ಥ ಮಾಸದ ಪೂಜೆಗಳು ಆರಂಭವಾಗಲಿವೆ. ಪ್ರತೀ ದಿನ ಮುಂಜಾನೆ 4.20ಕ್ಕೆ ತುಪ್ಪದ ಅಭಿಷೇಕ ನಡೆಯಲಿದ್ದು, ಈ ಕ್ರಿಯೆ ಬೆಳಗ್ಗೆ 11.30ರ ವರೆಗೆ ನಡೆಯಲಿದೆ. ಮಧ್ಯಾಹ್ನ ನಂತರ ಯಾವುದೇ ಅಭಿಷೇಕ ಇರುವುದಿಲ್ಲ.