ಹರಿದ್ವಾರ: ಗೋವುಗಳನ್ನು ಹತ್ಯೆ ಮಾಡುವವರು ದೇಶದ ಬಹುದೊಡ್ಡ ಶತ್ರುಗಳಾಗಿದ್ದು, ಅವರಿಗೆ ಈ ದೇಶದಲ್ಲಿ ಜೀವಿಸಲು ಹಕ್ಕು ಇಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿಕೆ ನೀಡಿದ್ದಾರೆ.
ಹಸುಗಳನ್ನು ಸಾಯಿಸುವವರು ಯಾರೇ ಆಗಿರಲಿ, ಅವರು ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ ಅವರು ಈ ದೇಶದ ಬಹುದೊಡ್ಡ ಶತ್ರುಗಳಾಗಿರುತ್ತಾರೆ. ಅವರಿಗೆ ಭಾರತ ದೇಶದಲ್ಲಿ ಜೀವಿಸಲು ಅರ್ಹತೆಯಿರುವುದಿಲ್ಲ ಎಂದು ಹರಿದ್ವಾರದಲ್ಲಿ ಗೋಪಾಷ್ಠಮಿ ಕಾರ್ಯಕ್ರಮದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ ರಾಜ್ಯದಲ್ಲಿ ಗೋವುಗಳನ್ನು ಸಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೋವುಗಳ ರಕ್ಷಣೆಗೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಗೋ ಹತ್ಯಾ ನಿಷೇಧಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಪ್ರಸ್ತಾವನೆಯೊಂದನ್ನು ಜಾರಿಗೆ ತಂದಿದೆ. ಗೋವುಗಳನ್ನು ಸಾಕುವವರಿಗೆ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸರ್ಕಾರ ಭೂಮಿ ಒದಗಿಸಿಕೊಡುತ್ತದೆ ಮತ್ತು ದನಗಳ ಮೇವಿಗೆ ವ್ಯವಸ್ಥೆ ಕಲ್ಪಿಸುತ್ತದೆ ಎಂದು ರಾವತ್ ತಿಳಿಸಿದರು.
Advertisement