ನವದೆಹಲಿ: ದೆಹಲಿಯ ನಿರ್ಭಯಾ ಗ್ಯಾಂಗ್ ರೇಪ್ನಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿದ ಬಾಲಾಪರಾಧಿ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದಾನೆ.
ಈತನಿಂದ ಸಮಾಜಕ್ಕೆ ಅಪಾಯವಿದೆ ಎಂದು ನಿರ್ಭಯಾ ಹೆತ್ತವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಂಗಳವಾರ ಕೇಂದ್ರ, ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬಾಲಾಪರಾಧಿಯು ಜನಸಾಮಾನ್ಯರ ಬದುಕು ಹಾಗೂ ಸ್ವಾತಂತ್ರ್ಯಕ್ಕೆ ಅಪಾಯಕಾರಿ. ಆತ ಬಿಡುಗಡೆಯಾದ ಬಳಿಕ ಇನ್ನಷ್ಟು ಅಪರಾಧವೆಸಗುವ ಸಾಧ್ಯತೆಯಿದೆ ಎಂದು ನಿರ್ಭಯಾ ಹೆತ್ತವರು ಕಳವಳ ವ್ಯಕ್ತಪಡಿಸಿದ್ದಾರೆ.
ಇವನಂಥವರಿಂದ ನಾಗರಿಕರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದೂ ಕೋರಿದ್ದಾರೆ ಎಂದು ಆಯೋಗ ತಿಳಿಸಿದೆ.