ವ್ಯಾಪಾರಕ್ಕೆ ದೇವರ ಹೆಸರು ಬಳಸುವಂತಿಲ್ಲ: ಸುಪ್ರೀಂಕೋರ್ಟ್
ನವದೆಹಲಿ: ``ದೇವರ ಹೆಸರು, ಪವಿತ್ರಗ್ರಂಥಗಳ ಹೆಸರನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಟ್ರೇಡ್ಮಾರ್ಕ್ ಮಾಡಿಕೊಳ್ಳುವಂತಿಲ್ಲ,'' ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
``ಕುರಾನ್, ಬೈಬಲ್, ಗುರು ಗ್ರಂಥ ಸಾಹಿಬ್, ರಾಮಾಯಣ ಮುಂತಾದ ಹಲವಾರು ಪವಿತ್ರ ಗ್ರಂಥಗಳ ಹೆಸರನ್ನು ಮಾರಾಟದ ವಸ್ತು ಅಥವಾ ಸೇವೆಗೆ ಬಳಸಿಕೊಳ್ಳಬಹುದೇ,'' ಎಂಬ ಪ್ರಶ್ನೆಗೆ ಸುಪ್ರೀಂ `ಇಲ್ಲ' ಎಂದಿದೆ. ಕಾನೂನಿನ ಪ್ರಕಾರ ವ್ಯಾಪಾರಕ್ಕೆ ದೇವ ದೇವತೆಗಳ ನೆರವು ಪಡೆಯುವಂತಿಲ್ಲ. ಇದು ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಿದೆ,'' ಎಂದು ಸುಪ್ರೀಂಕೋ ರ್ಟ್ ಪೀಠ ಹೇಳಿದೆ.
ಬಿಹಾರದ ಲಾಲ್ಬಾಬು ಪ್ರಿಯದರ್ಶಿ ಎಂಬ ಕಂಪನಿ ತನ್ನ ಅಗರಬತ್ತಿಗೆ `ರಾಮಾಯಣ' ಎಂದು ಹೆಸರಿಟ್ಟುಕೊಳ್ಳಲು ಬೌದ್ಧಿಕ ಹಕ್ಕು ಮನವಿ ಮಂಡಳಿಯ ಮುಂದೆ ಕೋರಿಕೊಂಡಿತ್ತು. ಇದನ್ನು ಅಮೃತ್ ಪಾಲ್ ಸಿಂಗ್ ಎಂಬುವರು ವಿರೋಧಿಸಿದ್ದರು. ಮಂಡಳಿ ಬಿಹಾರ ಕಂಪನಿಗೆ ಈ ಟ್ರೇಡ್ಮಾರ್ಕ್ ನೀಡಲು ನಿರಾಕರಿಸಿತ್ತು. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ.ಎನ್ .ವಿ.ರಾಮಣ್ಣ ಅವರನ್ನೊಳಗೊಂಡ ಪೀಠ ಪ್ರಿಯದರ್ಶಿ ಸಂಸ್ಥೆಯ ವಿರುದ್ಧ ತೀರ್ಪಿತ್ತಿದೆ.
``ರಾಮಾಯಣ' ಎಂಬುದು ಧರ್ಮ ಗ್ರಂಥ. ಅದನ್ನು ಟ್ರೇಡ್ ಮಾರ್ಕ್ ರೀತಿ ಬಳಸುವುದು ವಾಣಿಜ್ಯ ವಹಿವಾಟು ಕಾಯಿದೆ ಪ್ರಕಾರ ಸರಿಯಲ್ಲ ಎಂದು ಪೀಠ 16 ಪುಟಗಳ ತೀರ್ಪಿನಲ್ಲಿ ಹೇಳಿದೆ. ಅಗರಬತ್ತಿ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ರಾಮ, ಲಕ್ಷ್ಮಣ, ಸೀತೆಯರ ಚಿತ್ರಕ್ಕೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ