ಕೊಲ್ಕತ್ತಾ: ಅಸಹಿಷ್ಣುತೆ ಕುರಿತಂತೆ ನಟ, ನಿರ್ದೇಶಕ ಆಮೀರ್ ಖಾನ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಅಪರ್ಣ ಸೇನ್ ಅವರು ಆಮೀರ್ ರನ್ನು ಬೆಂಬಲಿಸಿದ್ದಾರೆ.
ಓರ್ವ ಭಾರತೀಯನಾಗಿ ಆಮೀರ್ ಖಾನ್ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವ ಮುಕ್ತ ಅವಕಾಶವಿದ್ದು, ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಅಪರ್ಣ ಸೇನ್ ಹೇಳಿದ್ದಾರೆ.
ಅಸಹಿಷ್ಣುತೆ ಹಿನ್ನೆಲೆ ಅವರು ಭಾರತವನ್ನು ತೊರೆಯುವುದಾಗಿ ಹೇಳಿಲ್ಲ. ಈ ಹೇಳಿಕೆ ಕುರಿತಂತೆ ಆಮೀರ್ ಖಾನ್ ಅವರೇ ಮುಂದೊಂದು ದಿನ ವಿವರಣೆ ನೀಡಲಿದ್ದಾರೆ ಎಂದರು.
ನಾನು ಗಮನಿಸಿದಂತೆ ಆಮೀರ್ ಖಾನ್ ಸೇರಿದಂತೆ ಯಾರೊಬ್ಬರು ಭಾರತ ಅಸಹಿಷ್ಣುತೆ ರಾಷ್ಟ್ರ ಎಂದು ಹೇಳಿಲ್ಲ. ಆದರೆ ಕೆಲವು ಕಡೆ ಅಸಹಿಷ್ಣುತೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.