ಜಾರ್ಖಂಡ್: ಜಾರ್ಖಂಡ್ ನ ಖೂಂಟಿಯಲ್ಲಿ ಸೋಲಾರ್ ಘಟಕವನ್ನು ಉದ್ಘಾಟಿಸಿರುವ ಪ್ರಧಾನಿ ಮೋದಿ, ಜಾರ್ಖಂಡ್ ಸ್ವಚ್ಛ ಪರಿಸರದ ವಿಷಯದಲ್ಲಿ ವಿಶ್ವಕ್ಕೇ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಯಥೇಚ್ಛ ಪ್ರಮಾಣದಲ್ಲಿ ನೈಸರ್ಗಿಕ ಸಂಪತ್ತು ಇದ್ದರೂ ಜಾರ್ಖಂಡ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿದೆ. ಖೂಂಟಿಯ ಕೋರ್ಟ್ ಕಟ್ಟಡದ ಮೇಲ್ಛಾವಣಿಯಲ್ಲಿ 180 -ಕಿಲೋ ವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟವನ್ನು ಉದ್ಘಾಟಿಸಲು ಸಂತಸವಾಗುತ್ತಿದೆ, ಮಹಾತ್ಮಾ ಗಾಂಧಿ ಅವರ ಜನ್ಮದಿನದಂದೇ ಸೌರ ವಿದ್ಯುತ್ ಘಟಕ ಉದ್ಘಾಟನೆಯಾಗಿದೆ. ಮಹಾತ್ಮ ಗಾಂಧಿ ಹಸಿರು ಮತ್ತು ಸ್ವಚ್ಛ ಪರಿಸರವನ್ನು ಪ್ರತಿಪಾದಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ವಿಶ್ವ ಸಂಸ್ಥೆಗೆ ಇತ್ತೀಚಿನ ಭೇಟಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ವಿಶ್ವದ ನಾಯಕರು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಹೆಚ್ಚು ಆತಂಕಗೊಂಡಿದಾರೆ. ನಮ್ಮ ಪೂರ್ವಜರು ಪ್ರಕೃತಿಯ ಮೇಲೆ ದಾಳಿ ಮಾಡುವುದನ್ನು ನಮಗೆ ಹೇಳಿಕೊಟ್ಟಿಲ್ಲ. ಭಾರತ ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕೋರ್ಟ್ ಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವುದರಿಂದ ನ್ಯಾಯ ವಿತರಣಾ ವ್ಯವಸ್ಥೆಯನ್ನು ಚುರುಕುಗೊಳಿಸಲಿದೆ, ಕೋರ್ಟ್ ಕೊಠಡಿಯಲ್ಲಿ ವಿದ್ಯುತ್ ಕೊರತೆಯಿಂದ ನ್ಯಾಯ ವಿತರಣಾ ವ್ಯವಸ್ಥೆಯನ್ನು ವಿಳಂಬಗೊಳಿಸುತ್ತಿದೆ ಎಂದು ನ್ಯಾಯಾಧೀಶರೊಬ್ಬರು ಹೇಳಿದ್ದನ್ನು ಮೋದಿ ಇದೇ ವೇಳೆ ಸ್ಮರಿಸಿದರು. ವಿದ್ಯುತ್ ಉಳಿತಾಯ ಮಾಡಲು ಎಲ್.ಇ.ಡಿ ಬಲ್ಬ್ ಗಳನ್ನು ಬಳಸುವಂತೆ ಮೋದಿ ಕರೆ ನೀಡಿದ್ದಾರೆ.
Advertisement