ಬಿಹಾರ: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರಚಾಟ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿರುವ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಮೋದಿಯನ್ನು ಧೃತರಾಷ್ಟ್ರ ಎಂದು ಕರೆದಿದ್ದಾರೆ.
ನರೇಂದ್ರ ಮೋದಿ ಕಲಿಯುಗದ ಧೃತರಾಷ್ಟ್ರ. ಹಸ್ತೀನಾಪುರದಲ್ಲಿ ಕುಳಿತಿರುವ ಈ ಕಲಿಯುಗದ ಈ ಧೃತರಾಷ್ಟ್ರ ಕೇವಲ ಅಂಧನಲ್ಲ. ಜೊತೆಗೆ ಕಿವುಡ, ಮೂಕನು ಕೂಡ ಆಗಿದ್ದಾನೆ ಎಂದು ಲಾಲು ಟ್ವೀಟರ್ ನಲ್ಲಿ ಟೀಕಿಸಿದ್ದಾರೆ.
ತೋರಿಕೆಗೆ ಮಾತ್ರ ಕಿರುಚಾಡುವ ಕಲಿಯುಗ ಈ ಧೃತರಾಷ್ಟ್ರ ಒಳಗಿನಿಂದ ಭಯಪಡುವ ಪುಕ್ಲ. ಏನಾದರೂ ಹೇಳಬೇಕು ಎನ್ನುವ ಸಂದರ್ಭದಲ್ಲಿ ಮೌನವಾಗಿ ಕುಳಿತಿರುತ್ತಾರೆ ಎಂದು ಲಾಲು ಟ್ವೀಟ್ ಮಾಡಿದ್ದಾರೆ.
ಹೊರಗಿನಿಂದ ಬಂದವರು ಬಿಹಾರದಲ್ಲಿ ಆಡಳಿತ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಅದಕ್ಕೆ, ಬಿಹಾರದ ಜನತೆ ಹೊರಗಿನವರಿಗೆ ಆಡಳಿತ ನಡೆಸಲು ಬಿಡುವುದಿಲ್ಲ. ಗುಜರಾತಿನವರಿಂದ ಬಿಹಾರವನ್ನು ಹಾಳು ಮಾಡಲು ನಾವು ಬಿಡುವುದಿಲ್ಲ ಎಂದು ಲಾಲು ಹೇಳಿದ್ದಾರೆ.