ಪಾಟ್ನ: ಸದಾ ವಿವಾದತ್ಮಕ ಹೇಳಿಕೆಗಳಿಂದಲೇ ಗಮನ ಸೆಳೆಯುತ್ತಿರುವ ಎಐಎಮ್ಐಎಮ್ ನಾಯಕ ಅಕ್ಬರುದ್ದೀನ್ ಓವೈಸಿ ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದು, ಮೋದಿಯೊಬ್ಬ ಕ್ರೂರಿ ಮತ್ತು ದೆವ್ವ ಎಂದು ಹೇಳುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.
ಬಿಹಾರ ಚುನಾವಣೆ ನಿಮಿತ್ತ ಕಿಶನ್ಗಂಜ್ನಲ್ಲಿ ಭಾನುವಾರ ತಮ್ಮ ಮೊದಲ ಪ್ರಚಾರವನ್ನು ಮಾಡುತ್ತಿದ್ದ ಅವರು, ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ 2002ರಲ್ಲಿ ನಡೆದ ಗುಜರಾತ್ ಗಲಭೆಯನ್ನು ಉಲ್ಲೇಖಿಸಿದ್ದು, ಮೋದಿಯವರು ಕ್ರೂರಿ ಮತ್ತು ಸೈತಾನ್ (ದೆವ್ವ). ಗುಜರಾತ್ ಗಲಭೆಗೆ ಪ್ರಮುಖ ಕಾರಣ ಮೋದಿಯವರೇ ಎಂದು ಆರೋಪಿಸಿದ್ದಾರೆ.
"ನನ್ನನ್ನು ಸೇರಿ ಹಲವರ ಪ್ರಕಾರ ಗುಜರಾತ್ ಗಲಭೆಗೆ ಪ್ರಮುಖ ಕಾರಣ ಮೋದಿ ಹೊರತು ಇನ್ಯಾರೂ ಅಲ್ಲ. 2004ರಲ್ಲಿ ಕಾಂಗ್ರೆಸ್ ಈ ಕ್ರೂರಿಯ ಮೇಲೆ ಎಫ್ಐಆರ್ ದಾಖಲಿಸಿ, ಜೈಲಿಗೆ ಹಾಕಿದ್ದರೆ ಮೋದಿ ಇಂದು ಪ್ರಧಾನಿಯಾಗುತ್ತಿರಲಿಲ್ಲ. ಕಾಂಗ್ರೆಸ್ ದುರ್ಬಲತೆಯನ್ನೇ ಗಾಳವಾಗಿ ಬಳಸಿಕೊಂಡ ಮೋದಿ ಇಂದು ಪ್ರಧಾನಿಯಾಗಿದ್ದಾರೆ", ಎಂದು ಹೇಳಿದ್ದಾರೆ.
ಇದೇ ವೇಳೆ "ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಕಿಡಿಕಾರಿದ ಅವರು, ತಾಕತ್ತಿದ್ದರೆ, ಗಿರಿರಾಜ್ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ನೋಡೋಣ," ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ದೇಶದಲ್ಲಿ ಅಮಾಯಕ ಮುಸ್ಲಿಮರ ಮೇಲೆ ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Advertisement