ದೇಶ
ಯುದ್ಧ ಸ್ಮಾರಕಕ್ಕೆ ಕೇಂದ್ರ ಅನುಮೋದನೆ
ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಸಮರ ವಸ್ತು ಸಂಗ್ರಹಾಲಯ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೆಹಲಿಯ...
ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಸಮರ ವಸ್ತು ಸಂಗ್ರಹಾಲಯ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೆಹಲಿಯ ಇಂಡಿಯಾ ಗೇಟ್ ಪಕ್ಕದಲ್ಲಿರುವ ಪ್ರಿನ್ಸೆಸ್ ಪಾರ್ಕ್ನಲ್ಲಿ ರೂಪುಗೊಳ್ಳಲಿರುವ ಯೋಜನೆ ಅಂದಾಜು ವೆಚ್ಚ ರು.500 ಕೋಟಿ. ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಸ್ವಾತಂತ್ರ್ಯೋತ್ತರದಲ್ಲಿ ನಡೆದ ಯುದ್ಧಗಳಲ್ಲಿ ಮಡಿದ ಸುಮಾರು 22500 ಸೈನಿಕರ ತ್ಯಾಗ ಬಲಿದಾನಗಳ ಪ್ರತೀಕವಾಗಿ ಯುದ್ಧ ಸ್ಮಾರಕ ನಿರ್ಮಿಸುವ ಪ್ರಸ್ತಾಪಕ್ಕೆ ಅನುಮೋದಿಸಲಾಯಿತು.
ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ವಿಶೇಷವೆಂದರೆ ಸ್ವಾತಂತ್ರ್ಯ ಬಂದ 69 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ರಕ್ಷಣೆಗಾಗಿ ಬಲಿದಾನ ಮಾಡಿದ ವೀರ ಯೋಧರಿಗೆ ಸ್ಮಾರಕ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಸೈನ್ಯ ಪಡೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಲೋಕಸಭಾ ಚುನಾವಣೆ ವೇಳೆ ಬಿಜೆಪಿ ರಾಷ್ಟ್ರೀಯ ಸೇನಾ ಸ್ಮಾರಕ ನಿರ್ಮಿಸುವಭರವಸೆ ನೀಡಿತ್ತು. ಸ್ಮಾಕರ ನಿರ್ಮಿಸುವಪ್ರಸ್ತಾಪಕ್ಕೆ 5 ದಶಕಗಳ ಇತಿಹಾಸ ಇದೆ. 1960ರ ದಶಕದಲ್ಲಿ ಇದರ ಪ್ರಸ್ತಾಪ ಕೇಂದ್ರದ ಮುಂದಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಸಚಿವರ ಉನ್ನತ ಸಮಿತಿ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು.ಆದರೆ, ಅದು ಜಾರಿಗೊಂಡಿರಲಿಲ್ಲ. ಪ್ರಸಕ್ತ ಬಜೆಟ್ನಲ್ಲಿ ವಿತ್ತ ಸಚಿವ ಜೇಟ್ಲಿ ಅವರು ಯುದ್ಧ ಸ್ಮಾರಕಕ್ಕಾಗಿ ರು.100 ಕೋಟಿ ಮೀಸಲಿಟ್ಟಿದ್ದರು. ರಾಜ್ಯಸಭೆ ಯಲ್ಲಿ ಸ್ವತಂತ್ರ ಸದಸ್ಯ ರಾಜೀವ್
ಚಂದ್ರಶೇಖರ್ ಅವರು ರಾಷ್ಟ್ರೀಯ ಯುದ್ಧ ಸ್ಮಾಕರ ನಿರ್ಮಿಸುವ ಪ್ರಸ್ತಾಪ ನನೆಗುದಿಗೆ ಬಿದ್ದಿರುವ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಸೈನಿಕರ ಕ್ಷೇಮಾಭಿವೃದ್ಧಿದಗಾಗಿ ಶ್ರಮಿಸುತ್ತಿರುವ ಫ್ಲ್ಯಾಗ್ ಆಫ್ ಆನರ್ ಸಂಸ್ಥೆ ಈ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆದಿತ್ತು.
ಪಿಎಲ್ಬಿ ಬೋನಸ್: .ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾನ್ ಗೆಜೆಟೆಡ್ ಸಿಬ್ಬಂದಿಗೆ ಉತ್ಪಾದಕತೆ ಆಧಾರಿತ ಬೋನಸ್ (ಪಿಎಲ್ಬಿ) ನೀಡಲು ಕೇಂದ್ರ ಸಂಪುಟ ಅನುಮೋದಿಸಿದೆ. ಉತ್ಪಾದಕತೆ ಆಧಾರಿತ ಬೋನಸ್ ಸೂತ್ರದ ಪ್ರಕಾರ, 12.58 ಲಕ್ಷ ರೈಲ್ವೆ ಸಿಬ್ಬಂದಿ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ಪಡೆಯಲಿದ್ದಾರೆ. ಪ್ರತಿ ಸಿಬ್ಬಂದಿ ಕನಿಷ್ಠ ರು. 3500 ರಿಂದ ಗರಿಷ್ಠ ರು. 8975 ರುಪಾಯಿ ಹೆಚ್ಚುವರಿ ವೇತನ ಪಡೆಯಲಿದ್ದಾರೆ.
ಎಐಐಎಂಎಸ್ ಸ್ಥಾಪನೆ: ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 3 ಏಮ್ಸ್ ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.