ಕೊಲ್ಕೊತಾ: ಶಾಂತದೂತೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಮದರ್ ತೆರೆಸಾ ಅವರ ಹೆಸರಿನಲ್ಲಿರುವ ಅನಾಥಾಶ್ರಮಗಳ ಮಾನ್ಯತೆ ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಿಷನರಿ ಆಫ್ ಚಾರಿಟಿ ದತ್ತು ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮದರ್ ತೆರೆಸಾ ಅವರ ಹೆಸರಿನಲ್ಲಿ ಮಿಷನರಿ ಆಫ್ ಚಾರಿಟಿ ನಡೆಸುತ್ತಿರುವ 19 ಅನಾಥಾಶ್ರಮಗಳ ಮಾನ್ಯತೆ ರದ್ದುಪಡಿಸಲು ಕೇಂದ್ರ ನಿರ್ಧರಿಸಿದೆ.
ಸರ್ಕಾರದ ನೂತನ ದತ್ತು ನಿಯಮಗಳನ್ನು ಮಿಷನರಿ ಆಫ್ ಚಾರಿಟಿ ಪಾಲಿಸುತ್ತಿಲ್ಲ ಹಾಗೂ ಆಗಸ್ಟ್ 15, 2015ರಿಂದ ಯಾವುದೇ ದತ್ತು ಸ್ವೀಕಾರ ಪಡೆದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮಿಷನರಿ ಆಫ್ ಚಾರಿಟಿ, ಮದರ್ ಅವರ ಅಣತಿಯಂತೆ ಕೆಲ ನಿಯಮಗಳನ್ನು ಪಾಲಿಸಲಾಗುತ್ತಿದೆ. ಸರ್ಕಾರದ ಹೊಸ ನೀತಿಯನ್ನು ಪಾಲಿಸಲು ಸಾಧ್ಯವಾಗದ ಕಾರಣ ದತ್ತು ಸ್ವೀಕಾರ ಮುಂದುವರೆಸಿಲ್ಲ ಎಂದು ವಿವರಣೆ ನೀಡಿದೆ.
ಇನ್ನು ಈ ಸಂಬಂಧ ಪ್ರತಿಕ್ರಿಯಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ, ಅನಾಥಾಶ್ರಮಗಳ ನೊಂದಣಿ ರದ್ದುಪಡಿಸಲು ಸರ್ಕಾರ ಮುಂದಾಗಿಲ್ಲ. ತೆರೆಸಾ ಮಿಷನರಿಗಳೇ ನೋಂದಣಿ ರದ್ದುಪಡಿಸುವಂತೆ ಕೋರಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ.
ವಿಚ್ಛೇದಿತರಿಗೆ, ಏಕಾಂಗಿಯಾಗಿರುವವರಿಗೆ ಮತ್ತು ವಿಚ್ಛೇದನ ದಂಪತಿಗೆ ಅನಾಥ ಮಕ್ಕಳನ್ನು ದತ್ತು ನೀಡಲು ತೆರೆಸಾ ಅನಾಥಾಶ್ರಮಗಳು ನಿರಾಕರಿಸಿವೆ ಎಂದಿದ್ದಾರೆ. ಸರ್ಕಾರ ರೂಪಿಸಿರುವ ನಿಯಮಾವಳಿಗಳ ಬಗ್ಗೆ ತೆರೆಸಾ ಮಿಷನರಿಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ವಿವಾಹವಾಗದ ಮಹಿಳೆಯರಿಗೆ ದತ್ತು ನೀಡುವುದೂ ಸೇರಿ ಹಲವು ವಿಚಾರಗಳ ಬಗ್ಗೆ ಮಿಷನರಿಗಳ ಆಕ್ಷೇಪವಿದೆ. ಹೀಗಾಗಿ ಮಾನ್ಯತೆ ರದ್ದು ಮಾಡುವಂತೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಮಿಷನರಿಗಳೇ ಅರ್ಜಿ ಸಲ್ಲಿಸಿವೆ ಎಂದು ಗಾಂಧಿ ಹೇಳಿದ್ದಾರೆ.
ಮಕ್ಕಳನ್ನು ದತ್ತು ಪಡೆಯುವುದು ಹಾಗೂ ನೀಡುವುದಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಿಂಗಲ್ ಪೇರೆಂಟ್(ಅಪ್ಪ ಅಥವಾ ಅಮ್ಮ) ಗಳಿಗೂ ದತ್ತು ಸ್ವೀಕಾರ ಸಾಧ್ಯವಾಗಿದೆ. ಅದರೆ, ಇತ್ತೀಚೆಗೆ ಬಿಹಾರ್ ಹಾಗೂ ಅಸ್ಸಾಂ ಮೂಲಕ ಸಿಂಗಲ್ ಪೇರೆಂಟ್ ಗಳು ಮಿಷನರಿ ಆಫ್ ಚಾರಿಟಿಯಿಂದ ಮಕ್ಕಳನ್ನು ದತ್ತು ಪಡೆಯಲು ಬಯಸಿ, ವಿಫಲರಾಗಿದ್ದರು. ಈ ಬಗ್ಗೆ ಸಚಿವಾಲಯಕ್ಕೆ ದೂರು ನೀಡಿದ್ದರು.
Advertisement