ಫರೀದ್ ಕೋಟ್: ತಮ್ಮ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್ ನನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಪಂಜಾಬ್ ನ ಫರೀದ್ ಕೋಟ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಸಿಖ್ ಸಮುದಾಯದ ಜನರು ಪೊಲೀಸರೊಂದಿಗೆ ಉಂಟಾದ ಗಲಭೆಯಲ್ಲಿ ಕನಿಷ್ಟ 15 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 12 ಮಂದಿ ಪೊಲೀಸರು ಸೇರಿದ್ದಾರೆ.
ಇಂದು ಬೆಳಗ್ಗೆ ಫರೀದಕೋಟ್ ಜಿಲ್ಲೆಯ ಕೊಟ್ಕಪುರ ಎಂಬಲ್ಲಿ ಸಿಖ್ ಸಮುದಾಯದವರು ತಮ್ಮ ಪವಿತ್ರ ಪುಸ್ತಕದ ವಿರುದ್ಧ ಅಪಚಾರ ಎಸಗಿದ್ದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರು ಮೋಗ ಮತ್ತು ಬತಿಂದಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಬಂದ್ ಮಾಡಲು ಯತ್ನಿಸಿದ್ದರು. ಆಗ ಪ್ರತಿಭಟನಾನಿರತ ನಾಯಕರನ್ನು ಪೊಲೀಸರು ಬಂಧಿಸಲೆತ್ನಿಸಿದಾಗ ಗಲಭೆಯೇರ್ಪಟ್ಟಿತ್ತು. ನಂತರ ಹಿಂಸಾರೂಪಕ್ಕೆ ತಿರುಗಿ ಹಲವು ಪೊಲೀಸರೂ ಕೂಡ ಗಾಯಗೊಂಡಿದ್ದಾರೆ.
ಇದೀಗ ಫರೀದ್ ಕೋಟ್ ನಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ನಿಯಂತ್ರಣದಲ್ಲಿದೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆಯನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಶಾಂತಿ ಕಾಪಾಡುವಂತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಪ್ರಕರಣದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಗುರುದ್ವಾರಕ್ಕೆ ತೆರಳುವ ಬರ್ಗರಿ ರಸ್ತೆಯಲ್ಲಿ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್ ನ ಸುಮಾರು 100 ಪುಟಗಳು ಹರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಇದನ್ನು ವಿರೋಧಿಸಿ ಸಿಖ್ಖರು ನಿನ್ನೆ ಪ್ರತಿಭಟನೆಗೆ ಇಳಿದಿದ್ದರು. ಈ ಸಂಬಂಧ ಫರೀದ್ ಕೋಟ್, ಮೊಗ, ಫಜಿಲ್ಕ, ಫೆರೋಜ್ ಪುರ್, ಮಕ್ತ್ ಸರ್ ಮೊದಲಾದೆಡೆ ಬಂದ್ ಘೋಷಿಸಲಾಗಿದೆ.
Advertisement