ಪ್ರಶಸ್ತಿ ಮರಳಿಸುವುದರ ಮೂಲಕ ವಿವಾದಗಳಿಗೆ ಸಾಹಿತಿಗಳು ಮರುಜೀವ

ಸಾಹಿತಿಗಳು ಪ್ರತಿಭಟನೆ ಹಾಗೂ ವಿವಾದಗಳಿಗಾಗಿಯೇ ತಯಾರು ಮಾಡಿರುವ ವ್ಯಕ್ತಿಗಳಂತೆ ವರ್ತಿಸುತ್ತಿದ್ದಾರೆ. ದಾದ್ರಿಯ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ ನಿಜಕ್ಕೂ ದುರದೃಷ್ಟಕರ ಘಟನೆ. ಘಟನೆಯನ್ನು ನಾವೂ ಖಂಡಿಸುತ್ತೇವೆ. ಹಾಗೆಂದು ಸರ್ಕಾರ ನೀಡಿರುವ ಗೌರವಾನ್ವಿಯ ಪ್ರಶಸ್ತಿಗಳನ್ನು ಸಾಹಿತಿಗಳು...
ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ನವದೆಹಲಿ: ಸಾಹಿತಿಗಳು ಪ್ರತಿಭಟನೆ ಹಾಗೂ ವಿವಾದಗಳಿಗಾಗಿಯೇ ತಯಾರು ಮಾಡಿರುವ ವ್ಯಕ್ತಿಗಳಂತೆ ವರ್ತಿಸುತ್ತಿದ್ದಾರೆ. ದಾದ್ರಿಯ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ ನಿಜಕ್ಕೂ ದುರದೃಷ್ಟಕರ ಘಟನೆ. ಘಟನೆಯನ್ನು ನಾವೂ ಖಂಡಿಸುತ್ತೇವೆ. ಹಾಗೆಂದು ಸರ್ಕಾರ ನೀಡಿರುವ ಗೌರವಾನ್ವಿಯ ಪ್ರಶಸ್ತಿಗಳನ್ನು ಸಾಹಿತಿಗಳು ಮರಳಿಸುವುದು ಸರಿಯಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ.

ದಾದ್ರಿ ಪ್ರಕರಣ ಹಾಗೂ ಸಾಹಿತಿಗಳ ಹತ್ಯೆಯನ್ನು ಖಂಡಿಸಿ ಸಾಹಿತಿಗಳು ಪ್ರಶಸ್ತಿಗಳನ್ನು ಮರಳಿಸುತ್ತಿರುವುದರ ವಿರುದ್ಧ ತಮ್ಮ ಬ್ಲಾಗ್ ನಲ್ಲಿ ಕಿಡಿಕಾರಿರುವ ಅವರು, ದಾದ್ರಿ ಪ್ರಕರಣ ಸಂಬಂಧ ಸಾಹಿತಿಗಳು ನಡೆಸುತ್ತಿರುವ ಪ್ರತಿಭಟನೆ ನಿಜವಾದ ಪ್ರತಿಭಟನೆಯೇ ಅಥವಾ ಇತರರಿಂದ ಪ್ರೇರಿತವಾದ ಪ್ರತಿಭಟನೆಯೇ...? ದೇಶದಲ್ಲಿ ಇದೀಗ ಅಶಾಂತಿ ತಲೆದೋರಿದೆ ಎನ್ನುತ್ತಿರುವ ಸಾಹಿತಿಗಳು ಸೃಷ್ಟಿಕೃತ ಬಂಡಾಯವನ್ನು ತೋರಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರದಿಂದ ಪುರಸ್ಕರಿಸಲ್ಪಟ್ಟ ಎಡ ಮತ್ತು ನೆಹರೂ ವಾದದ ಸಾಹಿತಿಗಳು ನರೇಂದ್ರ ಮೋದಿ ಸರ್ಕಾರವನ್ನು ಸಹಿಸಲಾಗದೆ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಎಡವಿ ಬಿದ್ದಿರುವ ಕಾಂಗ್ರೆಸ್ ಪಕ್ಷ ಮೇಲೇಳಲು ಯಾವುದೇ ದಾರಿಯಿಲ್ಲದೆ, ತನ್ನ ಪ್ರಾಮುಖ್ಯತೆಯನ್ನೇ ಕಳೆದುಕೊಂಡಿದೆ. ಹೀಗಾಗಿ ಇದೀಗ ಹಿಂದೆ ಪುರಸ್ಕಾರ ಪಡೆದವರು ಇನ್ನೊಂದು ತರನಾದ ರಾಜಕೀಯ ಮಾಡಲು ಆರಂಭಿಸಿದ್ದಾರೆ.

ಸರ್ಕಾರದ ವಿರುದ್ಧ ಬಂಡಾಯವೆದ್ದಿರುವವರು ಮೋದಿ ಹಾಗೂ ಬಿಜೆಪಿ ವಿರೋಧಿಗಳೆಂಬ ಹೊಸ ತಂತ್ರ ರೂಪಿಸಿ ಈ ರೀತಿ ಮಾಡುತ್ತಿದ್ದಾರೆ. ದಾದ್ರಿ ಪ್ರಕರಣವಿಡಿದು ಪ್ರತಿಭಟನೆಗಿಳಿದಿರುವವರು ನಿಜಕ್ಕೂ ದೇಶದಲ್ಲಿ ಸಮಸ್ಯೆ ಎದುರಾದಾಗ ಪ್ರತಿಭಟನೆ ಮಾಡುವುದಿಲ್ಲ. ಇದೀಗ ಪ್ರತಿಭಟನೆ ಮಾಡುತ್ತಿರುವ ಸಾಹಿತಿಗಳನ್ನು ನಾನು ಕೇಳುವುದಿಷ್ಟೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿಯವರನ್ನು ವಿರೋಧಿಸಿ ಎಷ್ಟು ಜನ ಬಂಧನಕ್ಕೊಳಗಾಗಿದ್ದಿರಿ? ಎಷ್ಟು ಮಂದಿ ತಮ್ಮ ಧನಿಯನ್ನು ಎತ್ತಿದ್ದಿರಿ? 2004 ಮತ್ತು 2014ರ ಅವಧಿಯಲ್ಲಿ ಭಾರತದಲ್ಲಿ ಲಕ್ಷ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿತ್ತು ಅಂದು ಏಕೆ ನಿಮ್ಮ ಧನಿ ಹೊರಬರಲಿಲ್ಲ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಚರ್ಚ್ ಗಳ ಮೇಲೆ ದಾಳಿ ನಡೆಯಿತು ಎಂದು ಕೆಲವು ಮಾಧ್ಯಮ ಹಾಗೂ ಪತ್ರಿಕೆಗಳು ವರದಿ ಮಾಡಿದ್ದವು. ಘಟನೆ ನಡೆಯುತ್ತಿದ್ದಂತೆ ಮೊದಲು ಅಲ್ಪಸಂಖ್ಯಾತ ಸಮುದಾಯ ಸಂಸ್ಥೆಗಳು ನಡೆಸಿದ ದಾಳಿ ಎಂದು ಹೇಳಲಾಗುತ್ತಿತ್ತು. ನಂತರ ಘಟನೆಗೆ ಸಂಬಂಧಿಸಿ ಮೋದಿಯವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮೌನವಹಿಸಿದ್ದಾರೆಂಬ ಟೀಕೆಗಳು ವ್ಯಕ್ತವಾಗಿದ್ದವು. ತನಿಖೆ ನಂತರ ಎಲ್ಲವೂ ಅಪರಾಧ ಕೃತ್ಯಗಳೆಂಬುದು ಸಾಬೀತಾಯಿತು. ನಂತರ ಮೋದಿ ವಿರುದ್ಧ ಪ್ರಚಾರ ಮಾಡುತ್ತಿದ್ದವರು, ಧನಿಯೆತ್ತಿದವರೆಲ್ಲರೂ ಕಣ್ಮರೆಯಾಗಿ ಹೋದರು.

ಕಲ್ಬುರ್ಗಿ ಹತ್ಯೆ ಪ್ರಕರಣ ನಡೆದಿದ್ದು ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯದಲ್ಲಿ. ದಾದ್ರಿ ಪ್ರಕರಣ ನಡೆದದ್ದು ಸಮಾಜವಾದಿ ಪಕ್ಷ ಆಳುತ್ತಿರುವ ಉತ್ತರ ಪ್ರದೇಶದಲ್ಲಿ. ಎನ್.ಧಬೋಲ್ಕರ್ ಹತ್ಯೆ ನಡೆದಿದ್ದು ಕಾಂಗ್ರೆಸ್ ಆಡಳಿತವಿರುವ ಮಹಾರಾಷ್ಟ್ರದಲ್ಲಿ. ಆದರೆ, ಆಯಾ ರಾಜ್ಯದ ಸರ್ಕಾರವನ್ನು ದೂಷಿಸುವ ಬದಲು ಕೇಂದ್ರವನ್ನೇಕೆ ಪ್ರತಿಭಟನಾಕಾರರು ದೂಷಿಸುತ್ತಿದ್ದಾರೆ.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ, 1984ರ ಸಿಖ್ ಹತ್ಯೆ ನಡೆದ ಸಂದರ್ಭದಲ್ಲಿ, ಭಗಲ್ ಪುರ ದಂಗೆ ನಡೆದ ಸಂದರ್ಭದಲ್ಲಿ, ಯುಪಿಎ ಆಡಳಿತಾವಧಿಯಲ್ಲಿ ನಡೆದ ಸಾವಿರಾರು ಕೋಟಿ ಹಗರಣ ನಡೆದ ಸಂದರ್ಭದಲ್ಲಿ ಈ ರೀತಿಯ ಯಾವುದೇ ಪ್ರತಿಭಟನೆಗಳು ಕಾಣಲಿಲ್ಲ. ಆದರೆ, ಇಂದು ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ವ್ಯಕ್ತಿಗಳು ಮಾತ್ರ ಬಿಜೆಪಿ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com