ನವದೆಹಲಿ: ಕಲ್ಲಿದ್ದಲು ಗಣಿ ಹಗರಣ ಕೇಸಿನಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಮ್ಮನ್ಸ್ ಜಾರಿ ಮಾಡುವುದಿಲ್ಲ ಎಂದು ದೆಹಲಿಯ ನ್ಯಾಯಾಲಯ ಹೇಳಿದೆ. ಇದರಿಂದಾಗಿ ಅನೇಕ ಸಮಯಗಳಿಂದ ಎದುರಾಗಿದ್ದ ಕಲ್ಲಿದ್ದಲು ಗಣಿ ಕೇಸಿನಿಂದ ಮನಮೋಹನ್ ಸಿಂಗ್ ನಿರಾಳರಾಗಿದ್ದಾರೆ.
ಜಾರ್ಖಂಡ್ ನ ಅಮರ್ಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು ಜಿಂದಾಲ್ ಸ್ಟೀಲ್ ಮತ್ತು ಗಗನ್ ಸ್ಪೋಂಜ್ ಕಂಪೆನಿಗಳಿಗೆ ಹಂಚಿಕೆ ಮಾಡಿದ್ದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಇತರ 15 ಮಂದಿ ವಿರುದ್ಧ ಕೇಸು ದಾಖಲಾಗಿತ್ತು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು.ಆ ಸಮಯದಲ್ಲಿ ಅವರು ಕಲ್ಲಿದ್ದಲು ಸಚಿವಾಲಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಪ್ರಧಾನಿ ಸಚಿವಾಲಯ ಕಲ್ಲಿದ್ದಲು ನಿಕ್ಷೇಪವನ್ನು ಜಿಂದಾಲ್ ಸಂಸ್ಥೆಗೆ ನೀಡಲು ಅನುಮತಿ ನೀಡಿತ್ತು ಎಂದು ಮಧು ಕೋಡಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಹಾಗಾಗಿ ಅವರನ್ನು ಕೂಡ ವಿಚಾರಣೆಗೆ ಕರೆಯಬೇಕೆಂದು ಮಧು ಕೋಡ ದೂರು ಸಲ್ಲಿಸಿದ್ದರು. ಆದರೆ ಮಾಜಿ ಪ್ರಧಾನಿಯವರು ಕಲ್ಲಿದ್ದಲು ಹಂಚಿಕೆ ಅಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ದೆಹಲಿಯ ಪಟಿಯಾಲಾ ನ್ಯಾಯಾಲಯ ಅವರಿಗೆ ನೊಟೀಸು ಜಾರಿ ಮಾಡದಿರಲು ನಿರ್ಧರಿಸಿದೆ.
ಮಧು ಕೋಡಾ ಅವರಲ್ಲದೆ ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್, ಕೇಂದ್ರದ ಮಾಜಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ ದಸರಿ ನಾರಾಯಣ್ ರಾವ್, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತ ಪ್ರಕರಣದ ಆರೋಪಿಗಳಲ್ಲಿ ಪ್ರಮುಖರಾಗಿದ್ದಾರೆ. ಮೋಸ ಮತ್ತು ಪಿತೂರಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
Advertisement