ಕೇಂದ್ರ ಸರ್ಕಾರವು ಇಂತಹ ತಕರಾರುಗಳನ್ನು ನದಿಪಾತ್ರದ ರಾಜ್ಯಗಳ ನಡುವೆ ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ತರಕಾರು ಇತ್ಯರ್ಥಕ್ಕೆ ನ್ಯಾಯಾಧಿಕರಣ ರಚನೆ ಮಾಡಲಿದೆ ಎಂದು ವಿವರಿಸಿದೆ. ಹೆಚ್ಚುವರಿ ನೀರು ಹಂಚಿಕೆಯನ್ನು ಎಲ್ಲ ರಾಜ್ಯಗಳಿಗೂ ಸಮಾನಪಾಲು ನೀಡಬೇಕು ಎಂಬ ಕರ್ನಾಟಕದ ವಾದವನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ಒಪ್ಪಿದೆ. ಸೆ. 15ರಂದು ನಡೆದ ಅಂತರ ನದಿಗಳ ಸಂಪರ್ಕಕ್ಕಾಗಿ ಇರುವ ಉನ್ನತ ಮಟ್ಟದ ಸಮಿತಿಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಹಾನದಿ ಗೋದಾವರಿ ನದಿಪಾತ್ರದ ಹೆಚ್ಚುವರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು. 1980ರಲ್ಲಿ 283 ಟಿಎಂಸಿ ನೀರು ನಿಗದಿಯಾಗಿದ್ದು, 2000ದಲ್ಲಿ ಈ ಪ್ರಮಾಣವನ್ನು 164 ಟಿಎಂಸಿಗೆ ತಗ್ಗಿಸಲಾಗಿತ್ತು. 2010ರಲ್ಲಿ ಸಲ್ಲಿಸಿದ ವರದಿಯಲ್ಲಿ ಕರ್ನಾಟಕಪಾಲು ಶೂನ್ಯಕ್ಕೆ ಇಳಿದಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಆಕ್ಷೇಪ ಎತ್ತಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಚಿವರು ಲಿಖಿತವಾಗಿ ಆಕ್ಷೇಪ ಸಲ್ಲಿಸಿದ್ದರು. ಕರ್ನಾಟಕ ಸಲ್ಲಿಸಿರುವ ಎಲ್ಲ ಆಕ್ಷೇಪಗಳಿಗೆ ಉತ್ತರನೀಡಿರುವ ಜಲಸಂಪನ್ಮೂಲ ಇಲಾಖೆ 2010ರ ವರದಿಯನ್ನು ಎನ್ಡಬ್ಲ್ಯೂಡಿಎ 2011ರಲ್ಲಿ ವಾಪಸ್ ಪಡೆದಿರುವುದರಿಂದ ಕರ್ನಾಟಕದ ಪಾಲು ಶೂನ್ಯಕ್ಕೆ ಇಳಿದಿದೆ ಎಂಬ ಅಂಕಿ ಅಂಶಗಳಿಗೆ ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಕರ್ನಾಟಕಕ್ಕೆ ಈಗ 2000ರಲ್ಲಿ ನಿಗದಿಯಾದ 164 ಟಿಎಂಸಿ ನೀರು ಲಭ್ಯವಾಗುತ್ತದೋ ಅಥವಾ ಎನ್ ಎನ್ಡಬ್ಲ್ಯೂಡಿಎ ಹೊಸದಾಗಿ ಅಂದಾಜು ಮಾಡುವ ವರದಿಯಾಧರಿಸಿ ಮರು ನಿಗದಿ ಮಾಡಲಾಗುತ್ತದೆಯೋ ಕಾದು ನೋಡಬೇಕಾಗಿದೆ. ನದಿ ಜೋಡಣೆಯ ನಂತರ ಲಭ್ಯವಾಗುವ ಹೆಚ್ಚುವರಿ ನೀರಿನ ಆಧಾರದ ಮೇಲೆ ಹಂಚಿಕೆ ನಡೆಯಲಿದೆ. ನ್ಯಾಯಾಧಿಕರಣವೂ ನೀರು ಹಂಚಿಕೆ ಮಾಡುವಾಗ ಕರ್ನಾಟಕಕ್ಕೆ ನ್ಯಾಯ ಒದಗಿಸಿಲ್ಲ ಎಂಬ ಅಂಶವನ್ನು ಪ್ರಸ್ತಾಪ ಮಾಡಲಾಗಿತ್ತು. ಆದರೆ, ಜಲಸಂಪನ್ಮೂಲ ಇಲಾಖೆ, ಹೆಚ್ಚುವರಿ ನೀರನ್ನೂ ನ್ಯಾಯಧಿಕರಣದ ಹಂಚಿಕೆ ಸೂತ್ರದಡಿಯೇ ಮರು ಹಂಚಿಕೆ ಮಾಡುವುದಾಗಿ ಹೇಳಿದೆ.ನದಿ ಜೋಡಣೆ ಯೋಜನೆ ಮಾಡುವಾಗ ಕಾವೇರಿ ಮತ್ತು ಕೃಷ್ಣಾ ಪ್ರದೇಶದ ಬರಪೀಡಿತ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬ ಆಕ್ಷೇಪಕ್ಕೆ ಉತ್ತರಿಸಿರುವ ಕೇಂದ್ರವು, ಎತ್ತರದಲ್ಲಿರುವುದರಿಂದ ಆ ಭಾಗಗಳನ್ನು ಒಳಗೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.