ಹೈದರಾಬಾದ್: ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗಡಿಯಾಚೆಗಿನ ಒಳನುಸುಳುವಿಕೆ ಕಡಿಮೆಯಾಗುತ್ತಿದ್ದು ಭಯೋತ್ಪಾದನೆ ನಿಗ್ರಹ ಹೆಚ್ಚುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಕಳೆದ 10 ವರ್ಷಗಳ ಅಂಕಿ-ಅಂಶಗಳನ್ನು ಹಾಗೂ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಅಂಕಿ- ಅಂಶಗಳನ್ನು ಪರಿಶೀಲಿಸಿದರೆ ಕಳೆದ ಒಂದು ವರ್ಷದಿಂದ ಗಡಿಯಾಚೆಗಿನ ಒಳನುಸುಳುವಿಕೆ ಕಡಿಮೆಯಾಗಿದೆ. ಅಂತೆಯೇ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಹೊರತಾಗಿಯೂ, ಗಡಿ ಭಾಗದಲ್ಲಿ ನಡೆಯುತ್ತಿರುವ ನುಸುಳುವಿಕೆ ಹೆಚ್ಚಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪರಿಕ್ಕರ್, ಭಾರತದ ಗಡಿಯೊಳಗೆ ನುಸುಳುವವರನ್ನು ನಿಗ್ರಹಿಸುತ್ತೇವೆ, ಈ ವರೆಗೂ ಗಡಿ ಅತಿಕ್ರಮಣ ಮಾಡುವವರ ವಿರುದ್ಧ ನಡೆದಿರುವ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಇದೇ ವೇಳೆ ಯುದ್ಧ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನು ನೇಮಕ ಮಾಡುವ ಸಂಬಂಧ ಇನ್ನೆರಡು ಮೂರು ತಿಂಗಳಲ್ಲಿ ನೀತಿಯನ್ನು ರೂಪಿಸುತ್ತೇವೆ ಎಂದು ಪರಿಕ್ಕರ್ ಹೇಳಿದ್ದಾರೆ.
Advertisement