ಗುಂಟೂರು: ದೇಶಾದ್ಯಂತ ಅಕ್ಟೋಬರ್ 22 ರಂದು ಆಯುಧಪೂಜೆ ಸಂಭ್ರಮ ಮನೆಮಾಡಿದ್ದರೆ, ಅದೇ ದಿನ ಆಂಧ್ರ ಪ್ರದೇಶ ಐತಿಹಾಸಿಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಲಿದೆ. ಅಕ್ಟೋಬರ್ 22ರಂದು ಮಧ್ಯಾಹ್ನ 12.45ಕ್ಕೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಅಮರಾವತಿಯಲ್ಲಿ ಹೈಟೆಕ್ ರಾಜಧಾನಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ದಕ್ಷಿಣ ಏಷ್ಯಾದಲ್ಲೇ ಅತ್ಯಾಧುನಿಕ ನಗರವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿರುವ ಹೈಟೆಕ್ 'ಅಮರಾವತಿ'ನಗರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.
ನಾಳಿನ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಥತೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸುಮಾರು 90 ನಿಮಿಷಗಳ ಕಾಲ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು ಐದು ಹಂತಗಳಲ್ಲಿ ದೇಶದ ಅತಿ ದೊಡ್ಡ ಸ್ಮಾರ್ಟ್ ಮತ್ತು ಗ್ರೀನ್ ಸಿಟಿಯ ನಿರ್ಮಾಣ ನಡೆಯಲಿದ್ದು, ಇದಕ್ಕಾಗಿ ಚಂದ್ರಬಾಬು ನಾಯ್ಡು ಸಿಂಗಪುರ ಸರಕಾರದ ನೆರವು ಪಡೆದಿದ್ದಾರೆ.
ಹೈಟೆಕ್ ರಾಜಧಾನಿ ಅಮರಾವತಿ ಕೃಷ್ಣಾ ನದಿಯ ತಟದಲ್ಲಿ, ವಿಜಯವಾಡಾ ಮತ್ತು ಗುಂಟೂರು ನಗರಳ ಮಧ್ಯೆ 217 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಮರಾವತಿ ನಗರ ತಲೆ ಎತ್ತಲಿದೆ. ಆಂಧ್ರಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಿಂದ ಅಮರಾವತಿ 40 ಕಿಮೀ ದೂರದಲ್ಲಿದೆ.
ಅಮರಾವತಿ ರಾಜಧಾನಿ ನಿರ್ಮಾಣ ಶಂಕು ಸ್ಥಾಪನೆಗೆ ಕಾವೇರಿ ನೀರು ಮತ್ತು ಕಾವೇರಿ ತಟದ ಮಣ್ಣನ್ನು ಬಳಸುತ್ತಿರುವುದು ವಿಶೇಷ. ಗಂಗಾ, ಯಮುನಾ, ಬ್ರಹ್ಮಪುತ್ರ ಸೇರಿದಂತೆ ದೇಶದ ವಿವಿಧ ಪವಿತ್ರ ನದಿಗಳಿಂದ ನೀರು ಮತ್ತು ಅಲ್ಲಿನ ಮಣ್ಣನ್ನು ಸಂಗ್ರಹಿಸಿ ತರುವಂತೆ ಸಿಎಂ ಚಂದ್ರಬಾಬು ನಾಯ್ಡು ಎಲ್ಲ ಸಂಸದರಿಗೂ ಸೂಚನೆ ನೀಡಿದ್ದಾರೆ.
Advertisement