
ಪಾಟ್ನಾ: ನವೆಂಬರ್ ಒಂದರಂದು ಬಿಹಾರ ವಿಧಾನಸಭೆಗೆ ನಡೆಯಲಿರುವ ಮೂರನೇ ಹಂತದ ಚುನಾವಣೆಗೆ ಪ್ರಚಾರ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾದೇಪುರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರ್ಯಾಲಿ ನಡೆಯುವ ಸ್ಥಳದ ಸುತ್ತಮುತ್ತ ಇರುವ ನೂರಾರು ಮರಗಳನ್ನು ಕಡಿದುರುಳಿಸಲಾಗಿದೆ.
ಮೋದಿಯವರು ರ್ಯಾಲಿ ನಡೆಸಲು ಸ್ಥಳಾವಕಾಶ ಕಲ್ಪಿಸಲು ಬಿ.ಪಿ.ಮಂಡಲ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ ನೂರಾರು ಫಲಭರಿತ ಮರಗಳನ್ನು ಧರೆಗುರುಳಿಸಲಾಗಿದೆ. ಕೆಲವು ಮರಗಳ ರೆಂಬೆಗಳನ್ನು ಕಡಿದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರದಿಯು ಮಾದೇಪುರಟೈಮ್ಸ್ ನ್ಯೂಸ್ ಪೋರ್ಟಲ್ ನಲ್ಲಿ ಮೊದಲು ಪ್ರಕಟಗೊಂಡಿತ್ತು. ಇದರ ಸಂಪಾದಕರಾದ ರುದ್ರ ನಾರಾಯನ್ ಯಾದವ್ ಹೇಳುವ ಪ್ರಕಾರ, ಸಾವಿರ ವರ್ಷಗಳಿಗೂ ಅಧಿಕ ವರ್ಷದ ಅನೇಕ ವೈವಿಧ್ಯತೆಯ ಸುಮಾರು 400ರಿಂದ 500 ಮರಗಳು ನಾಶಗೊಂಡಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಮೊಹಮ್ಮದ್ ಸೊಹೈಲ್ ಅವರನ್ನು ಸಂಪರ್ಕಿಸಿದಾಗ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಬಿಹಾರದ ಮಾದೇಪುರ ಮತ್ತು ಸಹರ್ಸ ಜಿಲ್ಲೆಗಳನ್ನೊಳಗೊಂಡ ಪ್ರವಾಹ ನಿರತ ಕೋಸಿ ಪ್ರಾಂತ್ಯದಲ್ಲಿ ಪರಿಸರ ಕಾರ್ಯಕರ್ತ ರಾಜೀವ್, ಚುನಾವಣಾ ರ್ಯಾಲಿಗೆ ನೂರಾರು ಮರಗಳನ್ನು ಧರೆಗುರುಳಿಸಿರುವುದು ಬೇಸರದ ವಿಷಯ ಎಂದು ಹೇಳಿದ್ದಾರೆ.
ಪರಿಸರ ಸಂರಕ್ಷಣೆ, ಪರಿಸರ ಕಾಳಜಿ ಬಗ್ಗೆ ಜನರಿಗೆ ಉತ್ತಮ ಸಂದೇಶ ನೀಡಬೇಕಾದ ಪ್ರಧಾನಿಯವರೇ ತಮ್ಮ ರ್ಯಾಲಿಗೆ ಮರಗಳನ್ನು ಕಡಿಯುವುದನ್ನು ತಡೆಯಬಹುದಾಗಿತ್ತು ಎಂದು ರಾಜೀವ್ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಅಧಿಕಾರಿ ಬಿ.ಎನ್. ವಿವೇಕ್, ಜಾಗದಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡಲಾಗಿತ್ತೇ ಹೊರತು ಮರಗಳನ್ನು ಕಡಿಯಲು ಅಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದಾಗ, ನಾವು ಪ್ರತಿಭಟನೆ ನಡೆಸಿ ನಮ್ಮ ಸಿಟ್ಟು, ಆಕ್ರೋಶವನ್ನು ಹೊರಹಾಕಬಹುದು, ಮತ್ತೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯಾದವ್ ಜಿಲ್ಲಾಡಳಿತಕ್ಕೆ ಪತ್ರ ಬರೆದು, ರ್ಯಾಲಿ ನಡೆಯುವುದಕ್ಕೆ ಮೊದಲು ಮತ್ತು ನಂತರ ಯಾವುದೇ ಹಾನಿ ಮತ್ತು ನಷ್ಟವಾದಲ್ಲಿ ಅದನ್ನು ಪಕ್ಷವೇ ಭರಿಸುತ್ತದೆ. ರ್ಯಾಲಿ ಮುಗಿದ ನಂತರ ಹೊಸ ಗಿಡಗಳನ್ನು ನೆಡುತ್ತೇವೆ ಎಂದು ಹೇಳಿದ್ದಾರೆ.
Advertisement