ನವದೆಹಲಿ: ಹರಿಯಾಣದಲ್ಲಿ ನಡೆದ ದಲಿತ ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ವಿರುದ್ಧ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ಹೇಳಿಕೆ ನೀಡುವಾಗ ಎಚ್ಚರದಿಂದರಬೇಕು ಎಂದು ಶುಕ್ರವಾರ ಹೇಳಿದ್ದಾರೆ.
ದಲಿತ ಮಕ್ಕಳ ಹತ್ಯೆ ಪ್ರಕರಣ ಸಂಬಂಧ ಕೇಂದ್ರ ಸಚಿವ ವಿ.ಕೆ.ಸಿಂಗ್ ಹಾಗೂ ಕಿರಣ್ ರಿಜಿಜು ಅವರು ನೀಡಿದ್ದ ಹೇಳಿಕೆಗಳು ದೇಶದಲ್ಲೆಡೆ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಹೀಗಾಗಿ ಸಚಿವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿವಾದಿತ ಹೇಳಿಕೆಗಳನ್ನು ನೀಡುವುದು. ನಂತರ ನಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸುಮ್ಮನೆ ಗೊಂದಲ ಮೂಡಿಸುವ ಬದಲು ಮೊದಲು ಹೇಳಿಕೆ ನೀಡುವಾಗ ಆಲೋಚನೆ ಮಾಡಬೇಕು. ನಂತರ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಫರೀದಾಬಾದ್ ನ ದಲಿತ ಕುಟುಂಬದ ಇಬ್ಬರು ಮಕ್ಕು ಸಜೀವ ದಹನವಾದ ಘಟನೆ ಕುರಿತಂತೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ವಿ.ಕೆ.ಸಿಂಗ್ ಅವರು, ಯಾರಾದರು ನಾಯಿಗೆ ಕಲ್ಲೆಸೆದರೆ ಅದಕ್ಕೂ ಕೇಂದ್ರ ಸರ್ಕಾರವನ್ನು ಹೊಣೆಗಾರರನ್ನಾಗಿಸಬೇಡಿ ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ದಲಿತ ಜನರ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು, ಅಲ್ಲದೆ, ವಿ.ಕೆ. ಸಿಂಗ್ ವಿರುದ್ಧ ಹಲವು ವಿರೋಧದ ಕೂಗುಗಳು ಕೇಳಿಬಂದಿದ್ದವು. ಹೇಳಿಕೆ ಖಂಡಿಸಿ ಪ್ರತಿಪಕ್ಷಗಳು ಸಿಂಗ್ ಅವರ ರಾಜೀನಾಮೆಯನ್ನು ಆಗ್ರಹಿಸಿದ್ದವು. ಹೀಗಾಗಿ ಎಚ್ಚೆತ್ತುಕೊಂಡಿದ್ದ ಸಿಂಗ್ ಅವರು ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.
Advertisement