ಜಮ್ಮುಕಾಶ್ಮೀರ: ಭಯೋತ್ಪಾದಕರು ಮತ್ತು ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರನ್ನು ಎನ್ ಕೌಂಟರ್ ಮಾಡಲಾಗಿದ್ದು, ಉಗ್ರರ ಗುಂಡಿಗೆ ಓರ್ವ ಯೋಧ ಸಾವನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಜಮ್ಮು ಕಾಶ್ಮೀರದ ಹಂದ್ವಾರ ಗ್ರಾಮದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡೆಯಲು ಸೇನಾಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತ್ಯುತ್ತರ ನೀಡಿದ ಸೇನಾಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಆದರೆ, ಘಟನೆಯಲ್ಲಿ ಓರ್ವ ಪಾರಾ ಕಮಾಂಡೋ ಮೃತಪಟ್ಟಿದ್ದಾರೆ.
ನಿನ್ನೆಯಷ್ಟೆ, ಬಾರಾಮುಲ್ಲಾ ಜಿಲ್ಲೆಯ ಲಾಡೂರಾ ಗ್ರಾಮದಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿ ಯಲ್ಲಿ ಯೋಧರು ಉಗ್ರನೊಬ್ಬನನ್ನು ಹೊಡೆದುರುಳಿಸಿದ್ದರು. ಬುಧವಾರ ನಡೆದ ಈ ಕಾರ್ಯಾಚರಣೆಯಲ್ಲಿಯೂ ಒಬ್ಬ ಯೋಧ ಕೂಡ ಮೃತಪಟ್ಟಿದ್ದರು.
ಒಟ್ಟು ಇಬ್ಬರು ಉಗ್ರರು ಅಡಗಿಕೂತಿದ್ದಾರೆ ಎನ್ನುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಯೋಧರು ಬುಧ ವಾರ ಬೆಳಗ್ಗೆ 7.20ಕ್ಕೇ ಕಾರ್ಯಾಚರಣೆ ಆರಂಭಿಸಿದ್ದರು. ಇವರಲ್ಲಿ ಇಮ್ತಿಯಾಜ್ ಅಹಮದ್ ಕಂದೂನನ್ನು ಹೊಡೆದುರುಳಿಸುವಲ್ಲಿ ಯೋಧರು ಯಶಸ್ವಿಯಾದರೆ, ಮತ್ತೊಬ್ಬ ಉಗ್ರ ನಜರ್ ಗಾಗಿ ಹುಡುಕಾಟ ಆರಂಭವಾಗಿದೆ. ಈ ಇಬ್ಬರೂ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯೀದ್ ಸಲಾಹುದ್ದೀನ್ ಆದೇಶ ಧಿಕ್ಕರಿಸಿ ಲಷ್ಕರ್-ಎ- ಇಸ್ಲಾಂ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ.
Advertisement