ನವದೆಹಲಿ: ಕೇಂದ್ರ ಸರ್ಕಾರದ ಗುರಿ ಹಾಗೂ ನಡೆ ಎರಡೂ ಸರಿಯಾಗಿದೆ ಹೀಗಾಗಿ ಸರ್ಕಾರಕ್ಕೆ ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ. ಅಲ್ಲದೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಬದ್ಧವಾಗಿದೆ ಎಂದು ಆರ್ಎಸ್ಎಸ್ ಹೇಳಿದೆ.
ನವದೆಹಲಿಯಲ್ಲಿ ನಡೆದ ಆರ್ಎಸ್ಎಸ್-ಬಿಜೆಪಿ ವಾರ್ಷಿಕ ಸಮಸ್ವಯ ಸಭೆಯ ಕೊನೆಯ ದಿನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಹೊರತು ಯಾವುದೇ ನಿರ್ಧಾರ ಕೈಗೊಳ್ಳುವ ಸಭೆ ಇದಾಗಿರಲಿಲ್ಲ ಎಂದು ಆರ್ಎಸ್ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರದ ಗುರಿ ಹಾಗೂ ನಡೆ ಎರಡೂ ಸರಿಯಾಗಿದೆ ಹೀಗಾಗಿ ಸರ್ಕಾರಕ್ಕೆ ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ ಹಾಗೂ ಸಭೆಯಲ್ಲಿ ಸರ್ಕಾರದ ಕಾರ್ಯವೈಖರಿ ಕುರಿತು ವಿಶ್ಲೇಷಣೆ ಮಾಡಿಲ್ಲ ಎಂದು ನಾಯಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ಯಾವುದೇ ನೈತಿಕ ಅಧಿಕಾರ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಸ್ವತಃ ರಿಮೋಟ್ ಕಂಟ್ರೋಲ್ ಗೆ ಒಳಪಟ್ಟಿರುವ ಕಾಂಗ್ರೆಸ್ ಬೇರೆಯವರನ್ನು ಟೀಕಿಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.