ರಾಜೀನಾಮೆ ನೀಡುವ ಬಗ್ಗೆ ಯೋಚಿಸಿಲ್ಲ: ರಾಕೇಶ್ ಮರಿಯಾ
ಮುಂಬೈ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ತೆಗೆದುಹಾಕಿದ ನಂತರ ತಾವು ಹುದ್ದೆ ತ್ಯಜಿಸುವ ಬಗ್ಗೆ ಯೋಚಿಸಿಲ್ಲ ಎಂದು ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ಮತ್ತು ಮಹಾರಾಷ್ಟ್ರ ರಾಜ್ಯ ಗೃಹ ರಕ್ಷಣಾ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡಿರುವ ರಾಕೇಶ್ ಮರಿಯಾ ಸ್ಪಷ್ಟಪಡಿಸಿದ್ದಾರೆ.
''ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ಸುಳ್ಳು'' ಎಂದು ರಾಕೇಶ್ ಮರಿಯಾ ಇಂದು ಬೆಳಗ್ಗೆ ಹೇಳಿದ್ದಾರೆ.ನಿನ್ನೆ ಹಠಾತ್ ಆಗಿ ರಾಕೇಶ್ ಮರಿಯಾ ಅವರನ್ನು ರಾಜ್ಯ ಗೃಹ ಖಾತೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ಮುಂಬೈ ಪೊಲೀಸ್ ಕಮಿಷನರ್ ಆಗಿ ಅಹ್ಮದ್ ಜಾವೇದ್ ಅವರನ್ನು ಕೂರಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ರಾತ್ರಿ ಜಪಾನ್ ಪ್ರವಾಸಕ್ಕೆ ಹೊರಡುವ ಮುನ್ನ ವರ್ಗಾವಣೆ ಆದೇಶಕ್ಕೆ ಸಹಿ ಹಾಕಿ ಹೊರಟಿದ್ದರು.
ನಿನ್ನೆ ಬೆಳಗ್ಗೆ ಹಠಾತ್ ವರ್ಗಾವಣೆ ಆದೇಶ ಮತ್ತು ಆ ನಂತರ ಕೇಳಿಬಂದ ಪ್ರತಿಪಕ್ಷಗಳ ತೀವ್ರ ವಿರೋಧದ ನಂತರ ರಾಕೇಶ್ ಮರಿಯಾ ಅವರೇ ಶೀನಾ ಬೋರಾ ಹತ್ಯೆಯ ತನಿಖೆಯ ನೇತೃತ್ವ ಮುಂದುವರಿಸಲಿದ್ದಾರೆ ಎಂದು ಸ್ಪಷ್ಟಣೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ