ರಾಕೇಶ್ ಮರಿಯಾರಿಗೆ ಬಡ್ತಿಯೇ ಅಲ್ಲ ತೆಗೆದು ಹಾಕಿರುವುದೇ?

ಇದೀಗ ಮಹಾರಾಷ್ಟ್ರ ಸರ್ಕಾರದ ಪ್ರತಿಪಕ್ಷ ಸದಸ್ಯರನ್ನು ಮತ್ತು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ ರಾಕೇಶ್ ಮರಿಯಾ ಅವರಿಗೆ ಸರ್ಕಾರ, ನಿಜವಾಗಿಯೂ...
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಕೇಶ್ ಮರಿಯಾ(ಸಂಗ್ರಹ ಚಿತ್ರ)
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಕೇಶ್ ಮರಿಯಾ(ಸಂಗ್ರಹ ಚಿತ್ರ)
Updated on

ಇದೀಗ ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ ರಾಕೇಶ್ ಮರಿಯಾ ಅವರಿಗೆ ಸರ್ಕಾರ, ನಿಜವಾಗಿಯೂ ಬಡ್ತಿ ನೀಡಿ ವರ್ಗಾವಣೆ ಮಾಡಿದ್ದೇ ಅಥವಾ ಸ್ಥಾನದಿಂದ ತೆಗೆದುಹಾಕಿದ್ದೇ? ಎಂಬುದು. ಬಲ್ಲ ಮೂಲಗಳ ಪ್ರಕಾರ ದೇಶದ ರಾಜಕಾರಣಿಗಳ ರಾಜಕಾರಣಕ್ಕೆ ಮತ್ತೊಬ್ಬ ಐಎಎಸ್ ಅಧಿಕಾರಿ ಬಲಿಯಾಗಿದ್ದಾರೆ ಎಂಬುದು ಈಗ ಎಲ್ಲೆಡೆ ಪ್ರಚಲಿತದಲ್ಲಿರುವ ಮಾತು.

ರಾಕೇಶ್ ಮರಿಯಾ ಅವರ ಕಮಿಷನರ್ ಹುದ್ದೆ ಅವಧಿ ಈ ತಿಂಗಳ 30ಕ್ಕೆ ಮುಗಿಯುವುದರಲ್ಲಿತ್ತು. ಅದಕ್ಕೆ 22 ದಿನಗಳ ಮೊದಲೇ ಅವರನ್ನು ಮುಂಬಡ್ತಿ ನೀಡಿ ವರ್ಗಾಯಿಸಲಾಗಿದೆ. ಸಾಮಾನ್ಯವಾಗಿ ಪೊಲೀಸ್ ಕಮಿಷನರ್ ಹುದ್ದೆಯನ್ನು ಹೆಚ್ಚುವರಿ ಮಹಾ ನಿರ್ದೇಶಕರಿಗೆ ನೀಡಲಾಗುತ್ತದೆ. ಆದರೆ ಮುಂಬೈಯಲ್ಲಿ ನಿನ್ನೆ ಗೃಹ ರಕ್ಷಣೆಯ ಮಹಾ ನಿರ್ದೇಶಕರಾಗಿದ್ದ ಅಹ್ಮದ್ ಜಾವೇದ್ ಅವರಿಗೆ ಪೊಲೀಸ್ ಕಮಿಷನರ್ ಹುದ್ದೆ ನೀಡಿ ಮುಖ್ಯಮಂತ್ರಿ ಫಡ್ನವೀಸ್ ಆದೇಶ ಹೊರಡಿಸಿದ್ದಾರೆ.

ಆದರೆ ಸರ್ಕಾರದ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಪಿ.ಭಕ್ಷಿ, ಮರಿಯಾ ಅವರೇ ಶೀನಾ ಬೋರಾ ಹತ್ಯೆಯ ತನಿಖೆ ಮುಂದುವರಿಸಲಿದ್ದಾರೆ ಎಂದು ನೀಡಿರುವ ಹೇಳಿಕೆ ಸೋಜಿಗವನ್ನುಂಟುಮಾಡುತ್ತಿದೆ. ಯಾಕೆಂದರೆ ಮಾಜಿ ಪೊಲೀಸ್ ಆಯುಕ್ತ ಇಂದಿನ ಪೊಲೀಸ್ ಆಯುಕ್ತರ ಅಧಿಕಾರವನ್ನು ಕಿತ್ತುಕೊಳ್ಳುವ ಸಂಪ್ರದಾಯವಿಲ್ಲ. ಮರಿಯಾ ಅವರನ್ನು ಅವಧಿಗೆ ಮೊದಲೇ ವರ್ಗಾವಣೆ ಮಾಡಿದ್ದು ಏಕೆ ಎಂಬ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಭಕ್ಷಿ, ಇನ್ನು ಒಂದು ವಾರದಲ್ಲಿ ಗಣೇಶೋತ್ಸವ ಆಚರಣೆ, ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿದ್ದು, ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೂರ್ವ ತಯಾರಿಗಾಗಿ ಅವಧಿಗೆ ಮೊದಲೇ ಅಹ್ಮದ್ ಜಾವೇದ್ ಅವರನ್ನು ನಿಯೋಜಿಸಲಾಗಿದೆ ಎಂಬ ಉತ್ತರ ನೀಡಿದ್ದಾರೆ.

ಯಾಕೆ ಈ ಬದಲಾವಣೆ:

ಬಲ್ಲ ಮೂಲಗಳ ಪ್ರಕಾರ, ರಾಕೇಶ್ ಮರಿಯಾ ಶೀನಾ ಬೋರಾ ಕೊಲೆ ರಹಸ್ಯವನ್ನು ಬೇಧಿಸುತ್ತಿರುವ ಸಂದರ್ಭದಲ್ಲಿ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದ ಅತಿ ಪ್ರಭಾವಿ ವ್ಯಕ್ತಿಯೊಬ್ಬರು ರಾಕೇಶ್ ಮರಿಯಾ ಅವರನ್ನು ಪೊಲೀಸ್ ಕಮಿಷನರ್ ಹುದ್ದೆಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಈ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಹಾರಾಷ್ಟ್ರ ಸರ್ಕಾರ ರಾಕೇಶ್ ಮರಿಯಾ ಅವರನ್ನು ತೆಗೆದುಹಾಕಿದೆ ಎನ್ನಲಾಗುತ್ತಿದೆ.

ಅಹ್ಮದ್ ಜಾವೇದ್ ಏಕೆ?:

1993ರ ಮುಂಬೈ ದಾಳಿಯ ಅಪರಾಧಿ ಯಾಕುಬ್ ಮೆಮನ್ ನನ್ನು ಗಲ್ಲು ಶಿಕ್ಷೆಗೆ ಏರಿಸಿದ ನಂತರ ಮುಂಬೈಯ ಮುಸ್ಲಿಂ ಸಮುದಾಯ  ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರ ಕೋಪವನ್ನು ತಣಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಯಿತು ಎನ್ನಲಾಗುತ್ತಿದೆ. ಅಹ್ಮದ್ ಜಾವೇದ್ ಅವರು ಇನ್ನು ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಕಳೆದ ವರ್ಷ ಮಾರ್ಚ್ ನಲ್ಲಿ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಮುಂಬೈ ಪೊಲೀಸ್ ಆಯುಕ್ತ ಹುದ್ದೆಗೆ ಅಹ್ಮದ್ ಜಾವೇದ್ ಅವರ ಹೆಸರನ್ನು ಸೂಚಿಸಿದ್ದರು. ಆದರೆ ಅಂದಿನ ಗೃಹ ಸಚಿವ ದಿವಂಗತ ಆರ್.ಆರ್.ಪಾಟೀಲ್ ಜಾವೇದ್ ಗಿಂತ ಒಂದು ಬ್ಯಾಚ್ ಕಿರಿಯ ರಾಕೇಶ್ ಮರಿಯಾ ಅವರನ್ನು ಕಮಿಷನರ್ ಆಗಿ ನೇಮಕ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com