ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಮತ್ತು ಆಗರ ಕೆರೆಗಳ ನಡುವಿನ ಪರಿಸರ ಸೂಕ್ಷ್ಮ ಪ್ರದೇಶದ ಸಮೀಕ್ಷೆ ಸರಿಯಾಗಿ ನಡೆಸದ ತಜ್ಞರ ಸಮಿತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸರಿಯಾಗಿ ಜಾಡಿಸಿದೆ. ಇನ್ನೊಮ್ಮೆ ಹೋಗಿ, ಸರಿಯಾಗಿ ಸಮೀಕ್ಷೆ ಮಾಡಿಕೊಂಡು ವರದಿ ಕೊಡಿ ಎಂದೂ ಅದು ಆದೇಶಿಸಿದೆ.
``ಸಮೀಕ್ಷೆಗೆ ಹೋಗುವ ಮುನ್ನ, ನೀವು ನಾವು ಕೊಟ್ಟ ಆದೇಶವನ್ನು ಸರಿಯಾಗಿ ಓದಿದ್ದೀರಾ? ಈ ಕೆಲಸದಲ್ಲಿ ನೀವು ಬದ್ಧತೆ ತೋರದೇ ತಪ್ಪು ಭಾವನೆ ಬರುವಂತೆ ಮಾಡಿದ್ದೀರಿ, ಪ್ರಕರಣ ವೊಂದರ ತೀರ್ಪು ಕೊಡುವ ಸಲುವಾಗಿ ನಿಮ್ಮನ್ನು ನಂಬಿಕೊಂಡಿದ್ದೇವೆ, ಆದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ'' ಎಂದು ತರಾಟೆಗೆ ತೆಗೆದುಕೊಂಡಿದೆ.
``ನಿಮ್ಮನ್ನು ಇಲ್ಲಿಗೆ ಬನ್ನಿ ಎಂದು ಕರೆದದ್ದಕ್ಕೆ ನಮಗೆ ತುಂಬಾ ನೋವಾಗಿದೆ. ನಿಮ್ಮ ದರ್ಜೆಯ ಅಧಿಕಾರಿಗಳಿಗೆ ಏನೂ ಸಮಸ್ಯೆಉಂಟಾಗಬಾರದಲ್ವೇ? ನಾವು 108 ಪುಟಗಳ ತೀರ್ಪನ್ನು ಬರೆಯುವುದು ಹುಡುಗಾಟವಲ್ಲ... ನ್ಯಾಯಮಂಡಳಿ ನಿಮ್ಮ ಮೇಲೆ ಭಾರಿ ಭರವಸೆ ಇಟ್ಟು ಹಿರಿಯ ಅಧಿಕಾರಿಗಳನ್ನು ಸೇರಿಸಿ ಸಮಿತಿ ಮಾಡಿತ್ತು'' ಎಂದು ರಾಷ್ಟ್ರೀಯ
ಹಸಿರು ನ್ಯಾಯಮಂಡಳಿಯ ಮುಖ್ಯಸ್ಥ ನ್ಯಾ. ಸ್ವತಂತರ್ ಕುಮಾರ್ ನೇತೃತ್ವದ ಪೀಠ ಹೇಳಿದೆ. ಇದಲ್ಲದೇ ಡಾ. ಡಿ.ಕೆ. ಅಗರ್ವಾಲ್ ಮತ್ತು ಫ್ರೋ. ಎ.ಆರ್. ಯೂಸುಫ್ ಅವರ ಉಪಸ್ಥಿತಿ ಯಲ್ಲಿ ಎಲ್ಲ ಸದಸ್ಯರು ವಿಚಾರಣೆ ಆರಂಭಿಸಬೇಕು ಎಂದೂ ಸೂಚಿಸಿದೆ.
ಕೋಪಕ್ಕೆ ಕಾರಣ?: ಹಸಿರು ನ್ಯಾಯಾಧಿಕರಣಕ್ಕೆ ಸಿಟ್ಟು ಬರಲು ಪ್ರಮುಖ ಕಾರಣ, ಉನ್ನತ ಮಟ್ಟದ ಸಮಿತಿಯು ಕೊಟ್ಟ ಸಮಯದಲ್ಲಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಿಲ್ಲ. ಇದಷ್ಟೇ ಅಲ್ಲ, ನೀಡಿದ್ದ ನಿರ್ದೇಶನಗಳನ್ನೂ ಪಾಲಿಸಿಲ್ಲ ಎಂಬುದು. ವರದಿಯಲ್ಲಿ ಪ್ರಮುಖ ಅಂಶಗಳ ಉಲ್ಲೇಖವೇ ಆಗಿಲ್ಲ. ಬೆಂಗಳೂರು ಕೆರೆ ಅಭಿವೃದ್ಧಿ ಪ್ರಾಧಿಕಾರ ನಮ್ಮ ಮುಂದೆ ಹೇಳಿದ ಅಂಶ ಬೇರೆ, ಇಲ್ಲಿ ಕೊಟ್ಟಿರುವ ವರದಿಯಲ್ಲಿನ ಅಂಶಗಳೇ ಬೇರೆಯಾ
ಗಿವೆ. ಹೀಗಾಗಿ ಸಮಿತಿಯು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳನ್ನಿಟ್ಟು ಕೊಂಡು ಸಮೀಕ್ಷೆ ನಡೆಸಿಲ್ಲ ಎಂದಿದೆ. ಇದಕ್ಕೂ ಪ್ರಮುಖ ವಿಚಾರವೆಂದರೆ, ಉನ್ನತ ಮಟ್ಟದ ಸಮಿತಿಯ ವರದಿ ಪ್ರಕಾರ, ಅತಿಕ್ರಮಣವಾಗಿರುವ ಭೂಮಿ 3 ಎಕರೆ 10 ಗುಂಟೆ. ಆದರೆ ಬಿಲ್ಡರ್ಗಳು ವಾಸ್ತವವಾಗಿ ಅತಿಕ್ರಮಣ ಮಾಡಿರುವ ಭೂಮಿ 72 ಎಕರೆ, ಇದರಲ್ಲಿ ಜೌಗುಭೂಮಿ ಕೂಡ ಸೇರಿದೆ. ಈ ಜಾಗದಲ್ಲಿ ಕಾಂಪೌಂಡ್ ಸೇರಿದಂತೆ ಇತರೆ ಕಟ್ಟಡಗಳ ನಿರ್ಮಾಣವೂ ಆಗಿದೆ ಎಂದು ಪೀಠ ಹೇಳಿದೆ.
ಹಸಿರು ನ್ಯಾಯಾಧಿ ಕರಣವು ಎಸ್ ಟಿಪಿ ಮತ್ತು ಇಟಿಪಿಯ ಇರುವ ಮತ್ತು ಉದ್ದೇಶಿತ ಯೋಜನೆಗಳು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಮೂಲಗಳ ಬಗ್ಗೆ ಪರಿಶೀಲನೆ, ಬಫರ್ ಝೋನ್ ನಲ್ಲಿನ ಪರಿಸರ ನಿಯಂತ್ರಣ ಮತ್ತು ವಾಯು ಮಾಲಿನ್ಯ, ವಾಯು ಮತ್ತು ಜಲ ಮಾಲಿನ್ಯ ಸಂಬಂಧಿತ ಅನುಮತಿ ಮತ್ತು ರಾಜಾಕಾಲುವೆಗಳ ಯಥಾಸ್ಥಿತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಬೆಂಗಳೂರಿನ ಮಂತ್ರಿ ಟೆಕ್ಝೋನ್ ಪ್ರೈವೇಟ್ ಲಿಮಿಟೆಡ್ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್ ಆ್ಯಂಡ್ ಸರ್ವೀಸಸ್
ಪ್ರೈವೇಟ್ ಲಿಮಿಡೆಟ್ಗೆ ಕ್ರಮವಾಗಿ ರು. 117.35 ಕೋಟಿ ಮತ್ತು ರು.22.5 ಕೋಟಿ ದಂಡ ವಿಧಿಸಿತ್ತು. ಪರಿಸರಕ್ಕೆ ಹಾನಿಯುಂಟು ಮಾಡುವ ಜತೆಗೆ ಅಕ್ರಮವಾಗಿ ಕಟ್ಟಡ ನಿರ್ಮಾಣ
ಮಾಡಿದ ಆರೋಪದ ಮೇರೆಗೆ ಭಾರಿ ಪ್ರಮಾಣದ ದಂಡ ವಿಧಿಸಲಾಗಿತ್ತು.
ಸಮಿತಿಯಲ್ಲಿ ಯಾರಿದ್ದಾರೆ?
ಪರಿಸರ ಮತ್ತು ಅರಣ್ಯ ಸಚಿವಾಲಯದ ಸಲಹೆಗಾರ
ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ
ಬಿಬಿಎಂಪಿಯ ನಗರ ಯೋಜನಾ ಮುಖ್ಯಸ್ಥ
ರಾಜ್ಯ ಪರಿಸರ ಪರಿಶೀಲನಾ ಸಮಿತಿಯ ಅಧ್ಯಕ್ಷರು
ಬೆಂಗಳೂರಿನ ಐಐಎಸ್ಸಿ (ಪರಿಸರ)ಯ ವಿಜ್ಞಾನಿ
ಪರಿಸರ ಸಚಿವಾಲಯದ ಮಾಜಿ ಸಲಹೆಗಾರ
ರೂರ್ಕಿಯ ರಾಷ್ಟ್ರೀಯ ಹೈಡ್ರಾಲಜಿ ಕೇಂದ್ರದ ಹಿರಿಯ ಅಧಿಕಾರಿ
Advertisement