ಶ್ರೀನಗರ: ದೆಹಲಿಯಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳು ಮತ್ತು ಪಾಕಿಸ್ತಾನದ ರೇಂಜರ್ಸ್ ಮಧ್ಯೆ ಎರಡು ದಿನಗಳ ಮಾತುಕತೆ ನಂತರವೂ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆಯಿಂದ ದಾಳಿ ಮುಂದುವರಿದಿದೆ.
ನಿನ್ನೆ ಜಮ್ಮು ಪ್ರಾಂತ್ಯದ ಪೂಂಚ್ ಜಿಲ್ಲೆಯಲ್ಲಿ ಗಡಿ ರೇಖೆ ಉಲ್ಲಂಘಿಸಿ ಬಂದ ಪಾಕಿಸ್ತಾನ ಪಡೆ ದಾಳಿ ಆರಂಭಿಸಿತು ಎಂದು ಜಮ್ಮುವಿನ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹ್ತಾ ತಿಳಿಸಿದ್ದಾರೆ.
ಕಳೆದ ರಾತ್ರಿ 11 ಗಂಟೆಯಿಂದ ಪೂಂಚ್ ಜಿಲ್ಲೆಯ ಎರಡು ವಲಯಗಳಲ್ಲಿ ಸೇನಾ ಪೋಸ್ಟ್ ಮೇಲೆ ಶಸ್ತಾಸ್ತ್ರಗಳಿಂದ ಪಾಕಿಸ್ತಾನಿ ಪಡೆ ದಾಳಿ ಆರಂಭಿಸಿತು. ದಾಳಿಯಲ್ಲಿ ಯಾವುದೇ ಭಾರತೀಯ ಯೋಧರ ಸಾವು-ನೋವು ಸಂಭವಿಸಿಲ್ಲ ಎಂದು ಮೆಹ್ತಾ ತಿಳಿಸಿದ್ದಾರೆ.ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮೊನ್ನೆ ಶುಕ್ರವಾರದಿಂದ ಪಾಕಿಸ್ತಾನ ಸೈನ್ಯದ ದಾಳಿ ನಿರಂತರವಾಗಿ ನಡೆಯುತ್ತಿದೆ.
Advertisement