ಕೊಲ್ಕತಾ: ತ್ರೀವ ಕುತೂಹಲ ಮೂಡಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಗುಪ್ತ ಕಡತಗಳನ್ನು ಇಂದು ಬಹಿರಂಗೊಳ್ಳಲಿದೆ.
ನೇತಾಜಿ ಅವರಿಗೆ ಸಂಬಂಧಪಟ್ಟಂತ ಎಲ್ಲಾ ಕಡತಗಳನ್ನು ಶುಕ್ರವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಬಹಿರಂಗಗೊಳಿಸಲಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಕಡತ ಬಹಿರಂಗಗೊಳ್ಳಲಿದೆ ಎಂದು ತಿಳಿದು ಬಂದಿದೆ. ಬೋಸ್ ಕುಟುಂಬದ ಮುಂದೆ ಕೊಲ್ಕತಾ ಪೊಲೀಸರು, ಕಡತಗಳನ್ನು ಒಪ್ಪಿಸಲಿದ್ದಾರೆ. ಆ ನಂತರ ಮಾಧ್ಯಮಗಳಿಗೆ ಅವರ ಕುಟುಂಬಸ್ಥರು ಯಾವಾಗ ಆ ಕುರಿತ ಮಾಹಿತಿ ಬಹಿರಂಗ ಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
64 ಕಡತಗಳಲ್ಲಿ ಕೇವಲ 9 ಕಡತಗಳು ಗುಪ್ತಚರ ಇಲಾಖೆಯ ಬಳಿಯಿವೆ. ಉಳಿದ 55 ಕಡತಗಳು ಕೊಲ್ಕತಾ ಪೊಲೀಸರ ಬಳಿ ಇದೆ ಎಂದು ಕೊಲ್ಕತಾ ಪೊಲೀಸ್ ನ ಪ್ರಧಾನ ಕಚೇರಿಯ ಜಂಟಿ ಆಯುಕ್ತ ರಾಜೀವ್ ಮಿಶ್ರಾ ಹೇಳಿದ್ದಾರೆ. ಆದಾಗ್ಯೂ, ನಿನ್ನೆ ಸಂಜೆ ವರೆಗೂ ಈ ಕುರಿತ ಕಡತಗಳ ಮಾಹಿತಿ ಮಾಧ್ಯಮಗಳಿಗೆ ಲಬ್ಯವಾಗಲಿದೆಯೇ? ಎಂಬ ಬಗ್ಗೆ ಗೊಂದಲಗಳಿದ್ದವು. ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡುವ ಬಗ್ಗೆ ಮಿಶ್ರಾ ಕೂಡ ಯಾವುದೇ ಸ್ಪಷ್ಟತೆ ನೀಡಲಿಲ್ಲ. ಈ ಬಗ್ಗೆ ಕಾದು ನೋಡೋಣ ಎಂದಷ್ಟೇ ಅವರು ಹೇಳಿದ್ದಾರೆ.
ನೇತಾಜಿ ಅವರ ಕಣ್ಮರೆ ರಹಸ್ಯವನ್ನು ಬೆಳಕಿಗೆ ತರುವ ದೃಷ್ಟಿಯಿಂದ ಅವರ ಮತ್ತು ಐಎನ್ಎಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗ ಮಾಡಬೇಕು ಎನ್ನುವ ಬೇಡಿಕೆ ಜನರಿಂದ ನಿರಂತರವಾಗಿ ಕೇಳಿ ಬರುತ್ತಿತ್ತು. ಈ ಕುರಿತು ಲೋಕಸಭೆಯಲ್ಲೂ ಧ್ವನಿ ಎತ್ತಲಾಗಿದೆ. ಅಲ್ಲದೇ, ನೇತಾಜಿಗೆ ಸಂಬಂಧಪಟ್ಟಂತೆ ಅನೇಕ ಹೇಳಿಕೆಗಳು ಕೇಳಿಬರುತ್ತಿದ್ದವು. ಈ ಎಲ್ಲಾ ಚರ್ಚೆಗಳಿಗೆ ಅಂತ್ಯವಾಡಲೆಂದು ತೀರ್ಮಾನಿಸಿ ನೇತಾಜಿಗೆ ಸಂಬಂಧಪಟ್ಟ ಕಡತಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
1945ರ ಆಗಸ್ಟ್ 22ರಂದು ಟೋಕಿಯೋ ರೇಡಿಯೋ, ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಜಪಾನ್ಗೆ ತೆರಳುತ್ತಿದ್ದಾಗ, ಈಗಿನ ತೈವಾನ್ ಆಗಿದ್ದ ಫೊರ್ಮೋಸಾದಲ್ಲಿ ಆಗಸ್ಟ್ 18, 1945ರಂದು ಸಂಭವಿಸಿದ್ದ ವಿಮಾನಾಪಘಾತದಲ್ಲಿ ಅಸುನೀಗಿದ್ದರು ಎಂದು ಘೋಷಿಸಿತ್ತು.
Advertisement