ನವದೆಹಲಿ: ಹುಡುಗಿಯರು ನೈಟ್ ಪಾರ್ಟಿಗೆ ಹೋಗುವುದು ಭಾರತೀಯ ಸಂಸ್ಕೃತಿ ಅಲ್ಲ, ಅದು ನಮ್ಮ ಸಂಸ್ಕೃತಿ ವಿರುದ್ಧವಾದದ್ದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಹುಡುಗಿಯರಿಗೆ ರಾತ್ರಿ ಪಾರ್ಟಿಗೆ ಹೋಗುವು ಎಲ್ಲಾ ಹಕ್ಕು ಇದೆ. ಆದರೆ ಅದು ಭಾರತೀಯ ಸಂಸ್ಕೃತಿ ಅಲ್ಲ' ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶರ್ಮಾ ಹೇಳಿದ್ದಾರೆ.
'ಆರ್ಎಸ್ಎಸ್ ರಾಷ್ಟ್ರೀಯ ಹಿತಾಸಕ್ತಿ ವಿರುದ್ಧವಾಗಿ ನಡೆದುಕೊಂಡಿದೆಯೇ? ಮತ್ತೆ ಏಕೆ ಆರ್ಎಸ್ಎಸ್ ಅನ್ನು ಟೀಕಿಸುತ್ತೀರಾ? ರಾಷ್ಟ್ರೀಯ ನೀತಿ ಬಗ್ಗೆ ಆರ್ಎಸ್ಎಸ್ನೊಂದಿಗೆ ಚರ್ಚಿಸುವುದು ತಪ್ಪೆ?' ಎಂದು ಮಹೇಶ್ ಶರ್ಮಾ ಅವರು ಪ್ರಶ್ನಿಸಿದ್ದಾರೆ.
ಜೈನರ ಹಬ್ಬದ ಪ್ರಯುಕ್ತ ಕೆಲವು ರಾಜ್ಯಗಳಲ್ಲಿನ ವಿವಾದಾತ್ಮಕ ಮಾಂಸ ಮಾರಾಟ ನಿಷೇಧದ ಬಗ್ಗೆಯೂ ಶರ್ಮಾ ಮಾತನಾಡಿದ್ದು, ಮತ್ತೊಂದು ಸಮುದಾಯವನ್ನು ನಾನು ಗೌರವಿಸುವುದೇಯಾದರೆ ಕೆಲವು ದಿನ ಮಾಂಸ ಮಾರಾಟ ನಿಷೇಧ ಮಾಡುವುದರಲ್ಲಿ ತಪ್ಪೇನಿದೆ? ನವರಾತ್ರಿ ವೇಳೆ ಅಥವಾ ರೋಜಾ-ಇಫ್ತಾರ್ ಕೂಟದ ವೇಳೆ ನಾವು ನಿಷೇಧ ಮಾಡಿಲ್ಲ. ಒಂದು ನಿರ್ಧಿಷ್ಟ ಸುಮುದಾಯದ ಭಾವನೆಗಳನ್ನು ಗೌರವಿಸುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ಮಹೇಶ್ ಶರ್ಮಾ ಅವರು ಈ ಹಿಂದೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮುಸ್ಲಿಮರಾಗಿದ್ದರೂ ಶ್ರೇಷ್ಠ ದೇಶಭಕ್ತರಾಗಿದ್ದರು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.
Advertisement