ಇವಿಎಂ, ಮತ ಪತ್ರದಲ್ಲಿನ ಚುನಾವಣಾ ಚಿಹ್ನೆ ತೆಗೆದುಹಾಕಿ: ಅಣ್ಣಾ ಹಜಾರೆ
ಮುಂಬೈ: ಮತ ಪತ್ರ ಹಾಗೂ ಇವಿಎಂನಲ್ಲಿರುವ ಚುನಾವಣೆ ಚಿಹ್ನೆಯನ್ನು ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೇಳಿಕೊಂಡಿದ್ದಾರೆ.
ರಾಳೆಗಣ್ಸಿದ್ದಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ಓದಲು ಬಾರದ ಮತದಾರರಿಗೆ ಚುನಾವಣಾ ಚಿಹ್ನೆ ಬೇಕಾಗಿತ್ತು. ಆದರೆ ಈಗ ಚುನಾವಣಾ ಆಯೋಗ ಇವಿಎಂನಲ್ಲಿ ಹಾಗೂ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲು ನಿರ್ಧರಿಸಿರುವುದರಿಂದ ಚಿಹ್ನೆಯ ಅಗತ್ಯ ಇಲ್ಲ ಎಂದಿದ್ದಾರೆ.
ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿರುವ ಅಣ್ಣಾ ಹಜಾರೆ ಅವರು, ಇವಿಎಂ ಹಾಗೂ ಮತ ಪತ್ರ ಎರಡರಲ್ಲೂ ಚುನಾವಣಾ ಚಿಹ್ನೆ ಹಾಗೂ ಭಾವಚಿತ್ರ ಎರಡು ಇದ್ದರೆ ಅಭ್ಯರ್ಥಿಗಳಿಗೆ ಗೊಂದಲವಾಗುತ್ತದೆ. ಹೀಗಾಗಿ ಚಿಹ್ನೆ ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ.
ಚುನಾವಣಾ ಚಿಹ್ನೆ ತೆಗೆದು ಹಾಕುವುದರಿಂದ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ. ಅಲ್ಲದೆ ಚುನಾವಣಾ ಸುಧಾರಣೆಗಾಗಿ ದೇಶಾದ್ಯಂತ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ