ರಾಯ್ ಪುರ: ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಉದ್ಯೋಗಸ್ಥ ಮಹಿಳೆಯರು ಕಾರಣವಂತೆ! ಇದೇನು ರಾಜಕಾರಣಿಗಳ ಹೇಳಿಕೆನಾ ಅಂತ ಹುಬ್ಬೇರಿಸಬೇಡಿ. ಹೀಗೆ ಹೇಳುತ್ತಿರುವುದು ಚತ್ತೀಸ್ ಗಢದ 10 ನೇ ತರಗತಿಯ ಪಠ್ಯ ಪುಸ್ತಕ!
ಸ್ವಾತಂತ್ರ್ಯಾ ನಂತರ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುವುದಕ್ಕೆ ಉದ್ಯೋಗಸ್ಥ ಮಹಿಳೆಯರು ಕಾರಣ ಎಂದು ಚತ್ತೀಸ್ ಗಢ ಪ್ರೌಢ ಶಿಕ್ಷಣ ಮಂಡಳಿಯ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕೆಲಸ ಮಾಡಲು ಪ್ರಾರಂಭಿಸಿರುವುದರಿಂದ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಪಠ್ಯದಲ್ಲಿ ಪ್ರಕಟಿಸಿರುವುದನ್ನು ಗಮನಿಸಿರುವ ಜಶ್ ಪುರ ಜಿಲ್ಲೆಯ, ಶಿಕ್ಷಕರೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದೆ. ಪಠ್ಯದಲ್ಲಿ ತಪ್ಪು ಮಾಹಿತಿ ಪ್ರಕಟವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥಹ ತಪ್ಪುಗಳು ನಡೆದಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಖುದೀರಾಂ ಬೋಸ್, ಜತೀಂದ್ರನಾಥ್ ಮುಖರ್ಜಿ, ಪ್ರಫುಲ್ಲ ಚಕಿ ಅವರನ್ನು ತೀವ್ರಗಾಮಿಗಳು ಹಾಗೂ ಭಯೋತ್ಪಾದಕರು ಎಂದು ಪ್ರಕಟಿಸಲಾಗಿತ್ತು.
Advertisement