ನವದೆಹಲಿ: ಭಾರತದೆಲ್ಲೆಡೆ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಹೊಂದಿರುವ ಫೋರ್ಟಿಸ್ ಹೆಲ್ತ್ಕೇರ್ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿವೀಂದರ್ ಮೋಹನ್ ಸಿಂಗ್. ಇವರು ಈಗ ತನ್ನ ಉನ್ನತ ಹುದ್ದೆಯನ್ನು ತ್ಯಜಿಸಿ ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ.
40 ವರ್ಷದ ಸಿಂಗ್ ಅವರು ಈ ಸಮೂಹದ ಸಂಸ್ಥಾಪಕರಲ್ಲಿ ಒಬ್ಬರು. ಅವರು ಈಗ ಅಮೃತಸರದಲ್ಲಿರುವ "ರಾಧಾ ಸ್ವಾಮಿ ಸತ್ಸಂಗ ಬ್ಯಾಸ್' ಎಂಬ ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಲು ನಿರ್ಧರಿಸಿದ್ದಾರೆ. 2016ರ ಜ. 1 ರಿಂದ ಇವರು ಕಂಪೆನಿಯಿಂದ ನಿರ್ಗಮಿಸಲಿದ್ದು, ಕೇವಲ ಕಾರ್ಯ ನಿರ್ವಾಹಕೇತರ ಉಪಾಧ್ಯಕ್ಷರಾಗಿ ಮುಂದು ವರಿಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಇನ್ನು ಅಧ್ಯಾತ್ಮದ ಮೂಲಕ ಜನಸೇವೆ: "2 ದಶಕದಿಂದ ಫೋರ್ಟಿಸ್ ಸಂಸ್ಥೆಯನ್ನು ಕಟ್ಟಿದ್ದೇನೆ. ಜೀವ ರಕ್ಷಣೆ ನನ್ನ ಜೀವನದ ಅವಿಭಾಜ್ಯ ಅಂಗ. ಇದೇ ಈಗ ಮತ್ತಷ್ಟು ಸೇವೆಗೈಯಲು ಪ್ರೇರಣೆ ನೀಡಿದೆ' ಎಂದು ನುಡಿಯುತ್ತಾರೆ ಶಿವೀಂದರ್ ಸಿಂಗ್.ರಾಧಾ ಸ್ವಾಮಿ ಬ್ಯಾಸ್ ಸಂಸ್ಥೆಗೆ ಕೋರಿಕೆ ಸಲ್ಲಿಸಿದ್ದೆ. ಈ ಕೋರಿಕೆಯನ್ನು ಸಂಸ್ಥೆ ಮನ್ನಿಸಿದ್ದು, ನನ್ನ ಸೌಭಾಗ್ಯ. ಫೋರ್ಟಿಸ್ ಕಂಪೆನಿಯ ಎಲ್ಲ ಜವಾಬ್ದಾರಿಗಳನ್ನು ಬಿಟ್ಟುಕೊಟ್ಟು ನಾನು ರಾಧಾಸ್ವಾಮಿ ಸತ್ಸಂಗದ ಡೇರೆ ಸೇರಿಕೊಳ್ಳುವೆ' ಎಂದು ಆರೋಗ್ಯ ಸೇವೆಯಲ್ಲಿ ಎಂಬಿಎ ಪದವೀಧರರಾಗಿರುವ ಶಿವೀಂದರ್ ವಿನಮ್ರ ಭಾವದಿಂದ ಹೇಳುತ್ತಾರೆ.
ಫೋರ್ಟಿಸ್ ಸಂಸ್ಥೆಯಲ್ಲಿ ಶಿವೀಂದರ್ ಮತ್ತು ಅವರ ಸೋದರ, ಕಂಪೆನಿಯ ಕಾರ್ಯ ನಿರ್ವಾಹಕ ಅಧ್ಯಕ್ಷ ಮಲ್ವಿಂದರ್ ಸಿಂಗ್ ಅವರ ಒಟ್ಟು ಪಾಲು ಶೇ. 71. ತನ್ನ ಸೋದರನ ನಿರ್ಧಾರ ಬೆಂಬಲಿಸಿದ ಮಲ್ವಿಂದರ್, "ಶಿವೀಂ ದರ್ ಈ ಹಂತದಲ್ಲಿ ಕೈಗೊಂಡ ನಿರ್ಧಾರ ನನ್ನನ್ನು ಪುಳಕಿತಗೊಳಿಸಿದೆ' ಎಂದು ಹೇಳಿದ್ದಾರೆ.
Advertisement