ಕೊಲ್ಕೋತ್ತಾ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ್ದು ಎನ್ನಲಾದ ಸುಮಾರು 100 ಕೋಟಿ ರೂಪಾಯಿ ಹಣವನ್ನು ಕೇಂದ್ರ ನೇರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಲಾಟರಿ ಮತ್ತು ಹವಾಲಾ ದಂಧೆ ಹೆಚ್ಚುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಅದರಲ್ಲಿಯೂ ನಕಲಿ ಲಾಟರಿ ದಂಧೆ ನಡೆಯುತ್ತಿದೆ. ಇದರ ವ್ಯಾಪ್ತಿ ತಮಿಳುನಾಡಿಗೆ ತಲುಪಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದರ ಆಧಾರದ ಮೇಲೆ ಗುರುವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಕೊಲ್ಕೋತ್ತಾದಲ್ಲಿ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದೆ.
ಕೋಲ್ಕತಾ ಸಮೀಪದ ಪುಟ್ಟ ದೋಣಿ ನಿಲುಗಡೆ ಜಾಗದಲ್ಲಿ 2 ಬೇರೆ ಬೇರೆ ಕಡೆಗಳಲ್ಲಿ ಹಣವನ್ನು 16 ಗೋಣಿಚೀಲ, 27 ಕೈಚೀಲ ಮತ್ತು 2 ಅಲ್ಮೇರಾದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಹಣವನ್ನು ತಮ್ಮ ವಶಕ್ಕೆ ಪಡೆದ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಈ ಹಣ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ್ದು ಎನ್ನಲಾಗುತ್ತಿದ್ದು ಈ ಕುರಿತಾಗಿಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement