ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ರಾಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಪದವಿ ಪೂರ್ವ ಇಲಾಖೆ ನಿರ್ದೇಶಕರ ಕಚೇರಿಯೇ ಸೋರಿಕೆಯ ಮೂಲ ಎಂಬ ಅನುಮಾನ ಮೂಡಿದೆ.
ಸರ್ಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಪಿಯು ನಿರ್ದೇಶಕರ ಕಚೇರಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ನಿಯಮಗಳ ಪ್ರಕಾರ ಪ್ರಶ್ನೆಪತ್ರಿಕೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಪಿಯು ಇಲಾಖೆ ನಿರ್ದೇಶಕರಿಗೆ ಹಸ್ತಾಂತರಿಸಿದ ನಂತರ ಸಚಿವರ ಸಹಿತ ಯಾರೊಬ್ಬರೂ ಪ್ರಶ್ನೆಪತ್ರಿಕೆಗಳನ್ನು ನೋಡುವುದಕ್ಕೆ ಸಾಧ್ಯವಿರುವುದಿಲ್ಲ. ಆದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಈಗಾಗಲೇ ಸಿಐಡಿ ವಿಚಾರಣೆಗೊಳಪಟ್ಟಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಯಲ್ಲಿರುವ ಅಧಿಕಾರಿಗಳು/ ಸಿಬ್ಬಂದಿ ವಿಭಾಗದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ.
ಪಿಯು ಶಿಕ್ಷಣ ಇಲಾಖೆಯ ಸಿಬ್ಬಂದಿ ವಿಭಾಗದಲ್ಲಿರುವವರೊಂದಿಗೆ ಒಂದು ವರ್ಷದ ಹಿಂದಿನವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ, ಈ ಬಗ್ಗೆ ಈಗಾಗಲೆ ಸಿಐಡಿ ಅಧಿಕಾರಿಗಳೊಂದಿಗೆ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವೊಮ್ಮೆ ನಿರ್ದೇಶಕರು ಕೆಲಸದ ಸಮಯದ ನಂತರ ಕೊಠಡಿಗೆ ಬೀಗ ಹಾಕದೇ ಹೋಗುತ್ತಾರೆ, ನಿರ್ದೇಶಕರು ಹೊರಟ ನಂತರ ಸಿಬ್ಬಂದಿ ವಿಭಾಗದವರು ಕೊಠಡಿಗೆ ಬೀಗ ಹಾಕುತ್ತಾರೆ. ಒಂದು ವೇಳೆ ಪ್ರಶ್ನೆ ಪತ್ರಿಕೆಗಳಿರುವ ಸ್ಟ್ರಾಂಗ್ ರೂಮ್ ನ ಕೀಲಿಗಳನ್ನು ನಿರ್ದೇಶಕರು ಕೊಠಡಿಯಲ್ಲೇ ಬಿಟ್ಟು ಹೋಗಿದ್ದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆ ಇದೆ, ಈ ಬಗ್ಗೆಯೂ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳನ್ನು ಕೋರಿದ್ದೇನೆ ಎಂದು ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
Advertisement