ಬಡ ರೈತರಿಗೆ ದಂಡ, ಶ್ರೀಮಂತರಿಗೆ ವಿನಾಯ್ತಿ ಏಕೆ? ಆರ್ ಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ತಾನು ಕಾವಲುನಾಯಿಯಂತೆ ಕೆಲಸ ಮಾಡಬೇಕು ಎಂಬುದನ್ನು ಮರೆಯಬಾರದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶ್ರೀಮಂತರು ಕೋಟ್ಯಂತರ ರೂಪಾಯಿ ತೆಗೆದುಕೊಂಡು ಓಡಿ ಹೋಗುತ್ತಾರೆ. ಅದೇ ಬಡ ರೈತರು ಸಾಲ ಕಟ್ಟದಿದ್ದರೆ ಅವರಿಗೆ ದಂಡ ಹಾಕುತ್ತೀರೇಕೆ ಎಂದು ಕೇಂದ್ರ ಬ್ಯಾಂಕ್ ನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡು ಕಟ್ಟಲು ಸಾಧ್ಯವಾಗದ ರೈತರ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲು ಬ್ಯಾಂಕ್ ಗಳು ಏಜೆಂಟ್ ರನ್ನು ಕಳುಹಿಸಿರುವ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಧೀಶರು ಹೀಗೆ ಛೀಮಾರಿ ಹಾಕಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ. ಅವರು ಅರ್ಜಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ನೀಡಿದ ಸುಮಾರು 1 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಇಟ್ಟುಕೊಂಡು ಮರು ಪಾವತಿಸದಿರುವವರನ್ನು ಗುರುತಿಸಿ ಅವರಿಗೆ ಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಮುನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ರಿಸರ್ವ್ ಬ್ಯಾಂಕ್, 500 ಕೋಟಿ ರೂಪಾಯಿಗೂ ಅಧಿಕ ಸಾಲ ಮರುಪಾವತಿ ಮಾಡಬೇಕಾಗಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಹೆಸರುಗಳನ್ನೊಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ನೀಡಿತ್ತು. ಕಾನೂನು ಮತ್ತು ಬ್ಯಾಂಕಿಂಗ್ ಮಾರ್ಗದರ್ಶನದ ಪ್ರಕಾರ ಗೌಪ್ಯವಾಗಿಡಬೇಕೆಂದು ಮನವಿ ಮಾಡಿತ್ತು. ಸಾಲದ ಮೊತ್ತವನ್ನು ಬಹಿರಂಗಪಡಿಸಬಹುದೇ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಆರ್ಥಿಕತೆ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಆರ್ ಬಿಐ ಹೇಳಿದೆ.
500 ಕೋಟಿ ರೂಪಾಯಿಗೂ ಅಧಿಕ ಸಾಲ ಬ್ಯಾಂಕ್ ಗಳಲ್ಲಿ ಬಾಕಿ ಉಳಿಸಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಪ್ರಶಾಂತ್ ಭೂಷಣ್ ಮನವಿ ಮಾಡಿದ್ದರು. ಹೆಸರುಗಳನ್ನು ಬಹಿರಂಗಪಡಿಸಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆಯೇ ಎಂದು ಹಣಕಾಸು ಇಲಾಖೆ ಮತ್ತು ಬ್ಯಾಂಕ್ ಗೆ ನ್ಯಾಯಾಲಯ ಕೇಳಿದೆ.
2013ರಿಂದ 2015ರವರೆಗೆ ಸುಮಾರು 28 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 1.14 ಲಕ್ಷ ಕೋಟಿ ರೂಪಾಯಿ ಸಾಲ ಮರುಪಾವತಿಯಾಗದೆ ಉಳಿದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ