ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡುವುದಕ್ಕೂ ಮುನ್ನ ನಿತೀಶ್ ಜೆಡಿಯು ಪಕ್ಷವನ್ನು ಬಲಗೊಳಿಸಲಿ: ಬಿಜೆಪಿ
ನವದೆಹಲಿ: ಬಿಜೆಪಿ, ಆರ್ ಎಸ್ ಎಸ್ ಮುಕ್ತ ಭಾರತಕ್ಕೆ ಕರೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಿತೀಶ್ ಕುಮಾರ್ ಹಗಲುಕನಸು ಕಾಣುತ್ತಿದ್ದಾರೆ ಎಂದು ಹೇಳಿದೆ.
17 ವರ್ಷಗಳ ಹಿಂದೆ ಬಿಜೆಪಿಯ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ನಿತೀಶ್ ಕುಮಾರ್ ಗೆ ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡುವ ಅರ್ಹತೆ ಏನಿದೆ ಎಂದು ಬಿಜೆಪಿ ವಕ್ತಾರ ಶಾನವಾಜ್ ಹುಸೇನ್ ಪ್ರಶ್ನಿಸಿದ್ದಾರೆ. ಹತಾಶಗೊಂಡಿರುವ ಜೆಡಿಯು ನಾಯಕ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಹಾರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೂ ಸಾಧ್ಯವಾಗದ ಪ್ರಾದೇಶಿಕ ಪಕ್ಷದ ನಾಯಕರಾಗಿರುವ ನಿತೀಶ್ ಕುಮಾರ್, ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ನನಸಾಗುವುದಿಲ್ಲ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡುವುದಕ್ಕೂ ಮುನ್ನ ನಿತೀಶ್ ಕುಮಾರ್ ಜನತಾದಳವನ್ನು ರಾಷ್ಟ್ರಮಟ್ಟದಲ್ಲಿ ಬಲಗೊಳಿಸಲಿ ಎಂದು ಶಾನವಾಜ್ ಹುಸೇನ್ ಸಲಹೆ ನೀಡಿದ್ದಾರೆ.