ನವದೆಹಲಿ: ಬ್ರಿಟನ್ ಸರ್ಕಾರದ ವಶದಲ್ಲಿರುವ ಅಮೂಲ್ಯ ಕೊಹಿನ್ನೂರ್ ವಜ್ರವನ್ನು ವಾಪಸ್ ಕೇಳುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ದಾಖಲೆಗಳ ಪ್ರಕಾರ ಕೊಹಿನ್ನೂರ್ ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲವಂತವಾಗಿ ಕೊಂಡೊಯ್ಯಲಾಗಿಲ್ಲ. ಈ ಅಮೂಲ್ಯ ವಜ್ರವನ್ನು ಮಹಾರಾಜ ರಂಜಿತ್ ಸಿಂಗ್ ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಆ್ಯಂಡ್ ಸೋಷ್ಯಲ್ ಜಸ್ಟೀಸ್ ಫ್ರಂಟ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆ ಸೋಮವಾರ ನಡೆದಿದ್ದು, ಆ ವೇಳೆ
ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಈ ರೀತಿಯ ಉತ್ತರ ನೀಡಿದೆ.
ಕೊಹಿನ್ನೂರ್ ವಜ್ರ, ಟಿಪ್ಪು ಸುಲ್ತಾನ್ ಅವರ ಖಡ್ಗ ಮತ್ತು ಉಂಗುರವನ್ನು ಬ್ರಿಟಿಷರು ಕೊಂಡೊಯ್ದಿದ್ದು, ಅದನ್ನು ವಾಪಸ್ ತರಬೇಕು ಎಂಬುದು ಈ ಸಂಘಟನೆಯ ಆಗ್ರಹವಾಗಿದೆ.
ಆದರೆ ಕೊಹಿನ್ನೂರ್ ವಜ್ರವನ್ನು ಬ್ರಿಟಿಷರು ಭಾರತದಿಂದ ಕದ್ದೊಯ್ದಿಲ್ಲ, ಬಲವಂತವಾಗಿ ತೆಗೆದುಕೊಂಡೂ ಹೋಗಲಿಲ್ಲ ಎಂದು ಸರ್ಕಾರ ಹೇಳಿದೆ.
ಆದಾಗ್ಯೂ, ಈ ಪ್ರಕರಣದಲ್ಲಿ ವಿದೇಶಾಂಗ ಸಚಿವಾಲಯದ ನಿಲುವು ಏನೆಂದು ಪ್ರಸ್ತುತ ಸಚಿವಾಲಯ ಸುಪ್ರೀಂಕೋರ್ಟ್ಗೆ ತಿಳಿಸಿಲ್ಲ. ಈ ಬಗ್ಗೆ ವರದಿ ಸಲ್ಲಿಸಲು ಕೋರ್ಟ್ ಒಂದು ವಾರದ ಕಾಲಾವಕಾಶವನ್ನು ನೀಡಿದೆ.
1850ರಲ್ಲಿ ವಿಕ್ಟೋರಿಯಾ ಮಹಾರಾಣಿಗೆ ಮಹಾರಾಜ ರಂಜಿತ್ ಸಿಂಗ್ ಈ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಕಿರೀಟದಲ್ಲಿರುವ ಈ ವಜ್ರವೀಗ ಟವರ್ ಆಫ್ ಲಂಡನ್ನಲ್ಲಿ ಪ್ರದರ್ಶನ ವಸ್ತುವಾಗಿದೆ.