ಚೆನ್ನೈ: ಕಾವೇರಿ ನದಿಯಲ್ಲಿನ ನೀರು ಬತ್ತಿ ಹೋಗಿರುವುದರಿಂದ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಕರ್ನಾಟಕ ಮತ್ತು ತಮಿಳುನಾಡಿನ ಜನತೆಗೆ ಬರಗಾಲದ ಬಿಸಿ ತೀವ್ರವಾಗಿ ತಟ್ಟಿರುವಾಗಲೇ ಕೇರಳ ಕೃಷಿ ಹಾಗೂ ಜಾನುವಾರು ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ವಿಸ್ತರಿಸಲು ಕೇರಳ ಸರ್ಕಾರ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಕಬಿನಿ ಜಲಾನಯನ ಪ್ರದೇಶದಲ್ಲಿರುವ ವಯನಾಡು ಜಿಲ್ಲೆಯ 100 ಎಕರೆ ದಟ್ಟ ಅರಣ್ಯ ಪ್ರದೇಶವನ್ನು ನಾಶಪಡಿಸಲು ಹೊರಟಿದ್ದು ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆನೆಗಳಿಗೆ ಪ್ರಶಸ್ತ ಅರಣ್ಯವಾಗಿರುವ ನಿತ್ಯ ಹರಿದ್ವರ್ಣ ಮತ್ತು ಶೋಲಾ ಕಾಡುಗಳ ನಡುವಿನ ಹುಲ್ಲುಗಾವಲುಗಳ ಪ್ರದೇಶದಲ್ಲಿ ಈ ಉದ್ದೇಶಿತ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಈ ಪ್ರದೇಶದಲ್ಲಿ ದೇಶದಲ್ಲಿಯೇ ಹೆಚ್ಚಿನ ಅಂದರೆ ವರ್ಷಕ್ಕೆ ಸರಾಸರಿ 6 ಸಾವಿರ ಮಿಲಿ ಮೀಟರ್ ಮಳೆ ಬೀಳುತ್ತದೆ. ಇಲ್ಲಿ ಬಿದ್ದ ಮಳೆಯಲ್ಲಿ ಸುಮಾರು 90 ಟಿಎಂಸಿ ನೀರು ಕಬಿನಿ ಜಲಾಶಯಕ್ಕೆ ಹೋಗುತ್ತದೆ. ಇದು ಕಾವೇರಿ ನದಿಯ ಮುಖ್ಯ ಉಪನದಿಯಾಗಿದೆ.
ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಅರಣ್ಯ ಇಲಾಖೆ, ಕೇರಳ ಹೈಕೋರ್ಟ್ ಮತ್ತು ಕೇಂದ್ರ ಪರಿಸರ ಸಚಿವಾಲಯ ನೊಟೀಸ್ ಕಳುಹಿಸಿದರೂ ಕೂಡ ಎರಡು ದಿನಗಳ ಹಿಂದೆಯಷ್ಟೇ ವಿಶ್ವವಿದ್ಯಾಲಯದ ಅಧಿಕಾರಿಗಳು ಅನೇಕ ಮರಗಳನ್ನು ಕಡಿದುಹಾಕಿದ್ದು, ಕೆಲಸ ಆರಂಭಿಸಲಿದ್ದಾರೆ.
Advertisement